ತುಮಕೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಸೋನೆ ಮಳೆ ಸುರಿಯಿತು. ತುಮಕೂರು ನಗರದಲ್ಲಿ ಮಧ್ಯಾಹ್ನ ಮಳೆ ಸ್ವಲ್ಪ ರಭಸ ಪಡೆಯಿತು. ರಾತ್ರಿಯವರೆಗೂ ಸೋನೆ ಮಳೆ ಸುರಿಯಿತು. ಮಧ್ಯಾಹ್ನವೇ ಮಳೆ ಬಿದ್ದ ಕಾರಣ ಸಂಜೆ ಮನೆಗಳನ್ನು ಸೇರಿಕೊಳ್ಳುವ ಧಾವಂತದಲ್ಲಿ ಜನರು ಇದ್ದರು. ನಗರದ ರಸ್ತೆಗಳಲ್ಲಿ ಕೆಸರು ಅಡರಿತ್ತು.
ಪಾವಗಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಿತು. ಗುಬ್ಬಿ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೇ ಆರಂಭವಾದ ಜಿಟಿ ಜಿಟಿ ಮಳೆ ಮಧ್ಯಾಹ್ನ ರಭಸ ಪಡೆದುಕೊಂಡಿತು. ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಹದವಾದ ಮಳೆ ಸುರಿಯಿತು. ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿಯೂ ಮಧ್ಯಾಹ್ನದಿಂದ ಉತ್ತಮ ಮಳೆ ಸುರಿಯಿತು. ತೋವಿನಕೆರೆ ಮಳೆ ಮಾಪನ ಕೇಂದ್ರದಲ್ಲಿ ಗುರುವಾರ ಸಂಜೆ 5 ಗಂಟೆ ವೇಳೆಗೆ 5 ಮಿ.ಮೀ ಮಳೆ ದಾಖಲಾಗಿದೆ.
ತುಮಕೂರು ತಾಲ್ಲೂಕಿನ ಕೋರ ಹೋಬಳಿಸುತ್ತಮುತ್ತ ಜಡಿಮಳೆ ಕಾರಣ ಬೇಸಾಯದ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಇದು ಈ ಭಾಗದಲ್ಲಿ ಅಷ್ಟೇ ಅಲ್ಲ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವ್ಯವಸಾಯಕ್ಕೆ ತೊಂದರೆ ಆಗಿದೆ. ಸೋನೆ ಮಳೆ ಕಾರಣ ಹೆಸರು ಗಿಡಗಳನ್ನು ಕೀಳಲು ತೊಂದರೆ ಆಗಿದೆ.
ಮಧುಗಿರಿ ತಾಲ್ಲೂಕು ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸೋನೆ ಮಳೆ ಸುರಿದಿದೆ. ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಮಧ್ಯಾಹ್ನದಿಂದ ಬಿಟ್ಟು ಬಿಟ್ಟು ಮಳೆ ಬರುತ್ತಿದೆ. ತಾಲ್ಲೂಕಿನ ಕೆಲವು ಕಡೆ ಹದವಾದ ಮಳೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.