ತುಮಕೂರು/ ಪಾವಗಡ: ತುಮಕೂರು ನಗರದಲ್ಲಿ ಭಾನುವಾರ ಸಂಜೆ ಮಳೆ ಸುರಿಯಿತು. ಸಂಜೆ 4 ಗಂಟೆಗೆ ಶುರುವಾದ ಮಳೆ ಅರ್ಧ ತಾಸು ಸುರಿಯಿತು. ಗುಬ್ಬಿ ಪಟ್ಟಣ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಚೌಕೇನಹಳ್ಳಿ ಮತ್ತು ಬಿಸಿಲಹಳ್ಳಿ ಭಾಗದಲ್ಲಿ ಮಳೆಯಾಯಿತು. ಚೇಳೂರು ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು.
ಪಾವಗಡ ತಾಲ್ಲೂಕಿನ ಹಲವೆಡೆ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದೆ.
ಬಿರುಗಾಳಿಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಆಲಿಕಲ್ಲು ಸಹಿತ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿತು. ಚಳ್ಳಕೆರೆ ಕ್ರಾಸ್ ಬಳಿ ಹರಿಪ್ರಸಾದ್ ಎಂಬುವರ ಪಪ್ಪಾಯ ತೋಟ ಹಾನಿಯಾಗಿದೆ.
ಪಟ್ಟಣದ ನ್ಯಾಯಾಲಯದ ಮುಂಭಾಗದ ಶ್ರೀವಾಣಿ ರಮೇಶ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಕಾರು, ದ್ವಿಚಕ್ರ ವಾಹನದ ಮೇಲೆ
ಮರ ಬಿದ್ದಿದೆ. ವಾಹನಗಳೂ ಜಖಂಗೊಂಡಿವೆ.
ಪಟ್ಟಣದ ಶಿರಾ ರಸ್ತೆ, ಚಳ್ಳಕೆರೆ ರಸ್ತೆ, ತಗ್ಗು ಪ್ರದೇಶಗಳಿಗೆ ಕೊಳಚೆ ನೀರಿನ ಜೊತೆಗೆ ಮಳೆ ನೀರು ಹರಿಯಿತು. ರಸ್ತೆ ಬದಿಯ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಗಣಕಯಂತ್ರ ನಾಶ
ಗುಬ್ಬಿ: ಪಟ್ಟಣದಲ್ಲಿ ರಾತ್ರಿ ಗುಡುಗು, ಸಿಡಿಲಿಗೆ ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಪ್ರೌಢ ಶಾಲೆಯ ಕಂಪ್ಯೂಟರ್ಗಳು, ಜೆರಾಕ್ಸ್ ಮೆಷಿನ್, ಯುಪಿಎಸ್ ಹಾಗೂ ಬ್ಯಾಟರಿ ಗಳು ಸಂಪೂರ್ಣ ಸುಟ್ಟು ಹೋಗಿವೆ. ತಾಲ್ಲೂಕಿನ ಬಹುತೇಕ ಭಾಗದಲ್ಲಿ ಹದ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.