ಕೊರಟಗೆರೆ: ಕೊರೊನಾ ಕಷ್ಟದ ಪರಿಸ್ಥಿತಿಯಲ್ಲೂ ಪಡಿತರ ವಿತರಣೆ ಅಂಗಡಿಗಳವರು ಜನರಿಗೆ ಆಹಾರ ಪದಾರ್ಥ ಒದಗಿಸಿದ್ದಾರೆ. ಇವರಿಗೆ ಸರ್ಕಾರದಿಂದ ಸಿಗಬೇಕಾದ ಕಮಿಷನ್ ಹಣ ಬಿಡುಗಡೆ ಆಗಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣದಲ್ಲಿ ಪಡಿತರ ಅಂಗಡಿ ಮಾಲೀಕರಿಗೆ ಸಿದ್ಧಾರ್ಥ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆಗಾಗಿ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜನರು ಅಂತರ ಕಾಯ್ದುಕೊಂಡು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಕ್ಷೇತ್ರದ ಆರು ಹೋಬಳಿ ವ್ಯಾಪ್ತಿಯ 130ಕ್ಕೂ ಹೆಚ್ಚು ಅಂಗಡಿ ಮಾಲೀಕರಿಗೆ ಉಚಿತವಾಗಿ ಆರೋಗ್ಯ ಕಾರ್ಡ್ ಹಾಗೂ ಲ್ಯಾಪ್ ಟಾಪ್ ಬ್ಯಾಗ್ ವಿತರಿಸಿದರು. ರಾಷ್ಟ್ರಪತಿ ಪದಕ ಪಡೆದ ಎಎಸ್ಐ ರಾಮಾಂಜನಪ್ಪ ಅವರನ್ನು ಸನ್ಮಾನಿಸಲಾಯಿತು.
ಪಡಿತರ ವಿತರಣೆ ಅಂಗಡಿ ಮಾಲೀಕರ ರಾಜ್ಯ ಸಂಘದ ಅಧ್ಯಕ್ಷ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಚಿಕ್ಕರಂಗಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಆರ್.ಶಿವರಾಮಯ್ಯ, ಪ್ರೇಮಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಮುಖಂಡರಾದ ಡಿ.ಎನ್.ರಮೇಶ್, ಕೆ.ಎಸ್.ನಾಗೇಶ್ ಕುಮಾರ್, ರಂಗಧಾಮಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.