ADVERTISEMENT

ನೇಮಕಾತಿಯಲ್ಲಿ ಶೇ 50 ಮೀಸಲಿಗೆ ಆಗ್ರಹ

ರಾಜ್ಯ ಪದವೀಧರ ಅಂಗನವಾಡಿ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 15:04 IST
Last Updated 11 ಸೆಪ್ಟೆಂಬರ್ 2020, 15:04 IST
ಬಿ.ಎನ್.ತನುಜ
ಬಿ.ಎನ್.ತನುಜ   

ತುಮಕೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರು, ಪ್ರಥಮ, ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಯಲ್ಲಿ ಪದವೀಧರ ಅಂಗನವಾಡಿ ಕಾರ್ಯಕರ್ತೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಬೇಕು ಎಂದು ರಾಜ್ಯ ಪದವೀಧರ ಅಂಗನವಾಡಿ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷೆ ಬಿ.ಎನ್.ತನುಜ ಒತ್ತಾಯಿಸಿದರು.

ಐಸಿಡಿಎಸ್ ಯೋಜನೆಯ ಖಾಸಗೀಕರಣ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಪದವೀಧರ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. 1976ರಿಂದಲೂ ಅತ್ಯಂತ ಕಡಿಮೆಗೌರವ ಧನಕ್ಕೆ ದುಡಿಯುತ್ತಾ ಬಂದಿದ್ದಾರೆ. 2015ರಲ್ಲಿ ಕೇಂದ್ರ ಸರ್ಕಾರ ಇಲಾಖೆಯ ನೌಕರರ ಭರ್ತಿ ಸಂದರ್ಭದಲ್ಲಿ ಶೇ 50ರಷ್ಟು ಹಾಲಿ ಕರ್ತವ್ಯದಲ್ಲಿರುವ ಕಾರ್ಯಕರ್ತೆಯರಿಗೆ ಅವಕಾಶ ಕಲ್ಪಿಸುವಂತೆ ಮಾರ್ಗಸೂಚಿ ನೀಡಿದೆ. ಆದರೆ ಅದನ್ನು ಬದಿಗಿಟ್ಟು 2018ರ ನೇಮಕಾತಿಯಲ್ಲಿ ಕೇವಲ ಶೇ 15ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಇದು ಖಂಡನೀಯ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನೇಮಕಾತಿಯಲ್ಲಿಪದವೀಧರ ಕಾರ್ಯಕರ್ತೆಯರಿಗೆ ಅವಕಾಶ ಕಲ್ಪಿಸಬೇಕು ಮನವಿ ಮಾಡಿದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2004ರಲ್ಲಿ ನೇರ ನೇಮಕಾತಿ ಮೂಲಕಅರ್ಹರನ್ನು ತುಂಬಿಕೊಂಡಿದೆ. ಆದರೆ 2018ರಲ್ಲಿ ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿದೆ. ಈ ವೇಳೆಪದವೀಧರ ಕಾರ್ಯಕರ್ತೆಯರಿಗೆ ಕನಿಷ್ಠ ಮೀಸಲು ನೀಡಿ ನಿರ್ಲಕ್ಷಿಸಲಾಗಿದೆ. ಆದ್ದರಿಂದ ಇಲಾಖೆಗಳ ಹುದ್ದೆ ನೇಮಕಾತಿಯನ್ನು ನೇರ ನೇಮಕಾತಿ ಮೂಲಕ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ 15 ವರ್ಷ ತುಂಬಿದಕಾರ್ಯಕರ್ತೆಯರಿಗೆ ರೋಸ್ಟರ್ ರೀತಿ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಪ್ರಧಾನಿಇಂದಿರಾಗಾಂಧಿ 1971ರಲ್ಲಿ ಜಾರಿಗೆ ತಂದ ಐಸಿಡಿಎಸ್ ಯೋಜನೆಯನ್ನು ಎನ್‌ಜಿಒಗಳಿಗೆ ನೀಡಿ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ. ಇದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಅಲ್ಲಲ್ಲಿ ಹಿಂದೆ ಸರಿದಿದೆ. ಆದರೆ ಪೋಷಣ್ ಅಭಿಯಾನ್ ಕಾರ್ಯಕ್ರಮದ ಮೂಲಕ ಮಕ್ಕಳು, ಗರ್ಭಿಣಿಯರಿಗೆ, ಕಿಶೋರಿಯರಿಗೆಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮ ರೂಪಿಸಿದೆ. ಕೂಡಲೇ ಸರ್ಕಾರ ಕಡಿತ ಮಾಡಿರುವ ಯೋಜನಾ ವೆಚ್ಚವನ್ನು ಬಿಡುಗಡೆ ಮಾಡಿ ಲಕ್ಷಾಂತರ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷೆ ಎಸ್.ಆರ್.ಪದ್ಮ, ಕೆ.ಎಸ್.ಲಲಿತ, ಸಮಿತಿ ರಾಜ್ಯ ಗೌರವಾಧ್ಯಕ್ಷ ಸಿ.ಶಿವಣ್ಣ,ರೈತ ಮುಖಂಡ ಅರುಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.