ತುಮಕೂರು: ಸುಪ್ರೀಂ ಕೋರ್ಟ್ನ ಒಂದು ಸಂಚಾರಿ ಪೀಠವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸುವ ಮೂಲಕ ದಕ್ಷಿಣ ರಾಜ್ಯಗಳ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ದಕ್ಷಿಣ ಭಾರತ ಸಂಚಾರಿ ಪೀಠ ಸ್ಥಾಪನಾ ಕ್ರಿಯಾ ಸಮಿತಿ ಮನವಿ ಮಾಡಿದೆ.
ಈ ಕುರಿತು ಕ್ರಿಯಾ ಸಮಿತಿ ಸದಸ್ಯರು ಶನಿವಾರ ಸಿದ್ಧಗಂಗಾ ಮಠಕ್ಕೆ ಬಂದು ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮನವಿಯೊಂದನ್ನು ಶ್ರೀಗಳಿಗೆ ಸಲ್ಲಿಸಿದರು.
ಮನವಿಯಲ್ಲಿ ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬರ್ ಮತ್ತು ಲಕ್ಷ ದ್ವೀಪದ ಅನೇಕ ಬಡ ಕಕ್ಷಿದಾರರು ದೆಹಲಿಗೆ ತೆರಳಬೇಕಾಗಿದೆ. ಇವರೆಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದಲ್ಲಿ ಒಂದು ಸಂಚಾರಿ ಪೀಠ ಸ್ಥಾಪನೆಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಕೋರಲಾಗಿದೆ.
ಶ್ರೀಗಳನ್ನು ಭೇಟಿ ಮಾಡಿದ ತಂಡದಲ್ಲಿ ಸಂಚಾರಿ ಪೀಠ ಸ್ಥಾಪನಾ ಕ್ರಿಯಾ ಸಮಿತಿ ಕನ್ವಿನರ್ ಭದ್ರಾವತಿ ಸತೀಶ್, ಹಿರಿಯ ವಕೀಲರಾದ ವಿ.ಲಕ್ಷ್ಮೀಕಾಂತರಾವ್, ಎಚ್.ಪುರುಷೋತ್ತಮ್, ಬಿ.ಕೆ.ಶರ್ಮಿಳಾ, ತುಮಕೂರು ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.