ತುಮಕೂರು: ಕೊರೊನಾದಿಂದಾಗಿ ಈ ಬಾರಿಯ ಶಬರಿಮಲೆ ಅಯ್ಯಪ್ಪ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಮನೆಯಲ್ಲೇ ಇದ್ದುಕೊಂಡು ಅಯ್ಯಪ್ಪನ ಸ್ಮರಣೆ ಮಾಡುವಂತೆ ಭಕ್ತರಿಗೆ ಮನವಿ ಮಾಡಲಾಗಿದೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್ ಹೇಳಿದರು.
ತಾಲ್ಲೂಕಿನ ಚಿಕ್ಕತೊಟ್ಲುಕೆರೆ ಅಟವಿ ಶಿವಯೋಗಿ ಮಠದಲ್ಲಿ ನಡೆದ ಅಯ್ಯಪ್ಪ ಸೇವಾ ಸಮಾಜಂ ರಾಜ್ಯಮಟ್ಟದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿರುವ ಶಬರಿ ಮಲೆಗೆ ಕೇರಳಿಗರಿಗಿಂತ ದಕ್ಷಿಣ ಭಾರತದ ಇತರೆ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಸಾವಿರ ಸಂಖ್ಯೆಯಲ್ಲಿದ್ದ ಯಾತ್ರಿಗಳ ಸಂಖ್ಯೆ ಪ್ರಸ್ತುತ ಕೋಟಿಗೆ ತಲುಪಿದೆ. ಹಿಂದಿನ ವರ್ಷಗಳಲ್ಲಿ ಭಕ್ತರಿಗೆ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಸಮಾನ ಮನಸ್ಕರು ಸೇವಾ ಸಮಾಜಂ ಹುಟ್ಟಿಹಾಕಿ, ಆ ಮೂಲಕ ಭಕ್ತರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ನಟ ಶಿವರಾಂ ಮಾತನಾಡಿ, ‘ರಾಜ್ಯದ 23 ಜಿಲ್ಲೆಗಳಲ್ಲಿ ಸಂಘಟನೆ ಸಕ್ರಿಯವಾಗಿದೆ. ಭಕ್ತರ ಸಂಖ್ಯೆಗೆ ಹೋಲಿಸಿದರೆ, ನಾವು ಮಾಡುವ ಸೇವೆ ಅತ್ಯಂತ ಕಡಿಮೆ. ಅಲ್ಲಿಗೆ ಬರುವ ಭಕ್ತರ ರಕ್ಷಣೆಗೆ ಆದ್ಯತೆ ನೀಡಲಾಗಿದೆ’ ಎಂದರು.
ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪ್ಪ, ‘ಯಾತ್ರಾತ್ರಿಗಳಿಗೆ ವ್ಯವಸ್ಥಿತವಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ’
ಎಂದರು. ಅಟವಿ ಶಿವಯೋಗಿ ಸುಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.