ತುಮಕೂರು: ಜಿಲ್ಲೆಯ ವಿವಿಧ ಕಡೆ ಗುರುವಾರ ಶಂಕರಾಚಾರ್ಯರ ಜಯಂತಿಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಣೆ ಮಾಡಲಾಯಿತು.
ನಗರದ ರಾಮಮಂದಿರದಲ್ಲಿ ಆಂಕರ ತತ್ವ ಪ್ರಸಾರ ಅಭಿಯಾನಂ ಮತ್ತು ಬ್ರಾಹ್ಮಣ ಮಹಾಸಭಾವತಿಯಿಂದ ಆಯೋಜಿಸಿದ್ಧ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ಮಾತನಾಡಿದರು.
ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ನಾಲ್ಕು ಬಾರಿ ಸಂಚರಿಸಿದ ಶಂಕರಾಚಾರ್ಯರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಪೂರ್ವ –ಪಶ್ಚಿಮ ಸಮುದ್ರದವರೆಗೆ ಹಬ್ಬಿರುವ ಭಾರತ ದೇಶ ಅಖಂಡ ಎಂದು ಸಾವಿರ ವರ್ಷಗಳ ಹಿಂದೆಯೇ ಘೋಷಿಸಿದ್ದರು. ಇದರ ಕುರುಹಾಗಿ ದೇಶದ ನಾಲ್ಕು ಕಡೆ ಅದ್ವೈತ ಮಠಗಳನ್ನು ಸ್ಥಾಪಿಸಿಸನಾತನ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿದರು ಎಂದು ವಿವರಿಸಿದರು.
‘ಮೂವತ್ತೆರಡು ವರ್ಷಗಳ ಅಲ್ಪ ಜೀವಿತಾವಧಿಯಲ್ಲಿಯೇ ಬ್ರಹ್ಮಸೂತ್ರ, ಉಪನಿಷತ್ತುಗಳು, ಭಗವದ್ಗೀತೆಗೆ ಅದ್ಭುತವಾದ ಭಾಷ್ಯ ಬರೆದು ಅದ್ವೈತ ವೇದಾಂತವನ್ನು ಇಡೀ ದೇಶದೆಲ್ಲೆಡೆ ಸಾರಿದರು’ ಎಂದು ತಿಳಿಸಿದರು.
ಮಹಾನಗರಪಾಲಿಕೆ ಸದಸ್ಯ ಸಿ.ಎನ್.ರಮೇಶ್ ಮತ್ತು ಬ್ರಾಹ್ಮಣ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಆರ್.ನಾಗರಾಜರಾವ್, ಅಭಿಯಾನದ ನಗರ ಸಂಚಾಲಕಿ ಸುಭಾಷಿಣಿ ರವೀಶ್ ವೇದಿಕೆಯಲ್ಲಿದ್ದರು.
ಶಂಕರ ತತ್ವಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಎಂ.ಕೆ.ನಾಗರಾಜರಾವ್ ಪ್ರಾಸ್ತಾವಿಕ ಮಾತನಾಡಿದರು. ಎಚ್.ಎಸ್. ರಾಘವೇಂದ್ರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.