ADVERTISEMENT

36 ಶಾಸಕರು ಬೆಂಬಲ ಸೂಚಿಸಿ ಸಿ.ಎಂ.ಗೆ ಪತ್ರ

ಶಿರಾ ಸಮೀಪ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಕ್ಕೆ ಸರ್ವಾನುಮತ ನಿರ್ಣಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:16 IST
Last Updated 28 ಏಪ್ರಿಲ್ 2025, 14:16 IST
ಶಿರಾ ನಗರಸಭೆ ಸಾಮಾನ್ಯ ಸಭೆಯಲ್ಲಿ ಸೋಮವಾರ ಶಾಸಕ‌ ಟಿ.ಬಿ.ಜಯಚಂದ್ರ ಮಾತನಾಡಿದರು. ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್ ಇದ್ದರು
ಶಿರಾ ನಗರಸಭೆ ಸಾಮಾನ್ಯ ಸಭೆಯಲ್ಲಿ ಸೋಮವಾರ ಶಾಸಕ‌ ಟಿ.ಬಿ.ಜಯಚಂದ್ರ ಮಾತನಾಡಿದರು. ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್ ಇದ್ದರು   

ಶಿರಾ: ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.‌

ನಗರಸಭೆ ಅಧ್ಯಕ್ಷ ಜೀಷಾನ್ ಮೆಹಮೂದ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಎಸ್.ಎಲ್.ರಂಗನಾಥ್ ವಿಷಯ ಪ್ರಸ್ತಾಪಿಸಿ ಶಿರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಿಸಲು ಅಗತ್ಯವಾದ ಎಲ್ಲ ಮೂಲ ಸೌಕರ್ಯ ಇದೆ. ಮೂರು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ‌ ಹಾದು ಹೋಗಲಿದೆ. ನೀರಿನ ಸೌಕರ್ಯ ಸಹ ಇದೆ. ಶಾಸಕ‌ ಟಿ.ಬಿ.ಜಯಚಂದ್ರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದು ಉತ್ತರ ಕರ್ನಾಟಕದ 36 ಶಾಸಕರು ಬೆಂಬಲ ಸೂಚಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಶಾಸಕರ ಪ್ರಯತ್ನಕ್ಕೆ ನಗರಸಭೆ ಸದಸ್ಯರು ಹಾಗೂ ತಾಲ್ಲೂಕಿನ ಸಂಪೂರ್ಣ ಬೆಂಬಲ ಇದೆ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಆರ್.ರಾಮು, ಬುರ್ಹಾನ್ ಮೆಹಮೂದ್, ಉಮಾ ವಿಜಯರಾಜು, ಬಿ.ಎಂ.ರಾಧಾಕೃಷ್ಣ ಅವರು ಈ ಬಗ್ಗೆ ನಗರಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಮೇಲೆ ಒತ್ತಡ ತಂದು ಶಾಸಕರ ಕೈಬಲಪಡಿಸಬೇಕು ಎಂದು ಸರ್ವಾನುಮತದಿಂದ ನಿರ್ಣಯ ಕೈಗೊಂಡರು.

ADVERTISEMENT

ನಕಲಿ ಇ–ಖಾತೆ: ಲಾಡುಪುರ ನಾಗರಾಜು ಎನ್ನುವವರ ನಿವೇಶನಕ್ಕೆ ನಕಲಿ ಇ–ಖಾತೆ ಮಾಡಿ ಕೊಡಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸದಸ್ಯೆ ಪೂಜಾ ಹೇಳಿದಾಗ; ಇ–ಖಾತೆಯನ್ನು ನಗರಸಭೆಯಿಂದ ಮಾಡಿಕೊಟ್ಟಿಲ್ಲ ಎಂದು ಪೌರಾಯುಕ್ತ ರುದ್ರೇಶ್ ಸಮಜಾಯಿಸಿ ನೀಡಿದರು.

ಇದರಿಂದ ಕುಪಿತರಾದ ಶಾಸಕ ಟಿ.ಬಿ.ಜಯಚಂದ್ರ ಅಧಿಕಾರಿಗಳ ಬೆಂಬಲ ಇಲ್ಲದೆ ನಕಲಿ ಖಾತೆ ಮಾಡಲು ಬರುವುದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಎರಡು ಪಟ್ಟು ಕಂದಾಯ: ನಗರಸಭೆಯಲ್ಲಿ ಇ–ಖಾತೆ ಮಾಡಿಕೊಡಲು ಎರಡು ಪಟ್ಟು ಕಂದಾಯ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ಖಾತೆ ಇದ್ದು ಅನುಮತಿ ಪಡೆದು ಮನೆ ಕಟ್ಟಿದವರಿಂದ ಏಕೆ ಎರಡು ಪಟ್ಟು ಕಂದಾಯ ವಸೂಲಿ ಮಾಡಲಾಗುತ್ತಿದೆ. ಅವರ ಅಸ್ತಿ ಏನು ಅಕ್ರಮವೇ ಎಂದು‌ ಸದಸ್ಯ ಆರ್.ರಾಮು ಪ್ರಶ್ನಿಸಿದರು.

ಸರ್ಕಾರದ ಅದೇಶದಂತೆ ಎರಡು ಪಟ್ಟು ಕಂದಾಯ ವಸೂಲಿ ಮಾಡಲಾಗುತ್ತಿದೆ ಎಂದು ಪೌರಾಯುಕ್ತರು ಉತ್ತರಿಸಿದಾಗ ಇದಕ್ಕೆ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿ ಖಾತೆ ಇದ್ದು ಅನುಮತಿ ಪಡೆದು ಮನೆ ನಿರ್ಮಿಸಿದವರಿಗೆ ನಿಗದಿತ ಕಂದಾಯ ಕಟ್ಟಿಸಿಕೊಂಡು ಇ–ಖಾತೆ ಮಾಡಿಕೊಡುವಂತೆ ಸದಸ್ಯ ಆರ್.ರಾಮು ಪಟ್ಟು ಹಿಡಿದರು.

ನಗರದಲ್ಲಿ ಸುಮಾರು 25ಸಾವಿರ ಇ–ಖಾತೆ ಮಾಡಿ ಕೊಡ ಬೇಕಿರುವುದರಿಂದ ಸರ್ಕಾರ ನಿಗದಿ ಮಾಡಿದ ಸಮಯದಲ್ಲಿ ಮಾಡಲು ಸಾಧ್ಯ ಇಲ್ಲ. ಅದ್ದರಿಂದ ಸಮಯ ವಿಸ್ತರಿಸುವಂತೆ ಸದಸ್ಯ ಎಸ್.ಎಲ್‌.ರಂಗನಾಥ್ ಸಲಹೆ ನೀಡಿದರು. ಹೊರಗುತ್ತಿಗೆಯಲ್ಲಿ ನೌಕರರನ್ನು ನೇಮಕ ಮಾಡಿಕೊಂಡು ಇ–ಖಾತೆ ಮಾಡಿಕೊಡುವಂತೆ ಶಾಸಕ ಟಿ.ಬಿ.ಜಯಚಂದ್ರ ಸೂಚಿಸಿದರು.

ಐಡಿಎಸ್ಎಂಟಿ ಹಳೆ ಮಳಿಗೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಸಭೆ ಅನುಮೋದನೆ ನೀಡುವಂತೆ ಅಧ್ಯಕ್ಷ ಜೀಷಾನ್ ಮೊಹಮದ್ ಮನವಿ ಮಾಡಿದಾಗ; ಖಾಸಗಿಯವರು ಈ ಜಾಗ ತಮಗೆ ಸೇರಿದೆ ಎಂದು ಹೇಳುತ್ತಿದ್ದಾರೆ. ಇದು ಯಾರಿಗೆ ಸೇರಿದ ಜಾಗ ಎನ್ನುವ ಬಗ್ಗೆ ನಗರಸಭೆ ಸದಸ್ಯರು ಹಾಗೂ ಜನರಿಗೆ ಅನುಮಾನ ಇದೆ. ಮೊದಲು ಇದು ಯಾರ ಜಾಗ ಎನ್ನುವುದನ್ನು ಸ್ವಷ್ಟಪಡಿಸಿ ಎಂದು ಸದಸ್ಯ ಎಸ್.ಎಲ್.ರಂಗನಾಥ್, ಬಿ.ಎಂ.ರಾಮಕೃಷ್ಣ, ಉಮಾ ವಿಜಯರಾಜು ಪಟ್ಟು ಹಿಡಿದರು. ಈ ಸಮಯದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಸದಸ್ಯ ಆರ್.ರಾಮು ಇದು ನಗರಸಭೆ ಆಸ್ತಿ ಎಲ್ಲ ದಾಖಲೆಗಳು ಇದೆ ಎಂದಾಗ ಮೊದಲು ಅಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿ ನಮ್ಮ ಜಾಗ ಭದ್ರಪಡಿಸಿ ನಂತರ ಅಂಗಡಿ ಮಳಿಗೆ ನಿರ್ಮಿಸುವಂತೆ ಸದಸ್ಯರು ಸಲಹೆ ನೀಡಿದರು.‌

ಕಾವಲುಗಾರರ ನೇಮಿಸಿ: ನಗರಕ್ಕೆ ಕುಡಿಯುವ ನೀರು ಒದಗಿಸುವ ದೊಡ್ಡಕೆರೆಗೆ ಕಸ ಎಸೆದು ನೀರನ್ನು ಅನೈಮರ್ಲ ಮಾಡಲಾಗುತ್ತಿದೆ. ಅದನ್ನು ತಡೆಯಲು ಕಾವಲುಗಾರರನ್ನು ನೇಮಕ ಮಾಡುವಂತೆ ಸದಸ್ಯ ಬಿ.ಎಂ.ರಾಧಾಕೃಷ್ಣ ಸಲಹೆ ನೀಡಿದರು.

ಕಲಾಂ ಪ್ರತಿಮೆ ಸ್ಥಾಪಿಸಿ: ನಗರದ ದರ್ಗಾ ವೃತ್ತದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಪ್ರತಿಮೆ ಸ್ಥಾಪಿಸುವಂತೆ ಸದಸ್ಯ ಮಹಮದ್ ಜಾಫರ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.