ADVERTISEMENT

ವಂಚಿತ ಸಮುದಾಯ ಕಡೆಗಣನೆಗೆ ಆಕ್ಷೇಪ

ಸ್ಮಾರ್ಟ್ ಸಿಟಿ; ‌ಪ್ರಗತಿಪರ ಸಂಘಟನೆ ಒಕ್ಕೂಟ, ಕೊಳೆಗೇರಿ ನಿವಾಸಿಗಳ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 15:56 IST
Last Updated 20 ಜನವರಿ 2019, 15:56 IST
ಸಭೆಯಲ್ಲಿ ಎ.ನರಸಿಂಹಮೂರ್ತಿ ಮಾತನಾಡಿದರು. ಕೆ.ದೊರೈರಾಜ್ ಇದ್ದರು
ಸಭೆಯಲ್ಲಿ ಎ.ನರಸಿಂಹಮೂರ್ತಿ ಮಾತನಾಡಿದರು. ಕೆ.ದೊರೈರಾಜ್ ಇದ್ದರು   

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ವಂಚಿತ ಸಮುದಾಯಗಳ ಅಭಿವೃದ್ಧಿ ಕುರಿತ ಸಮಾಲೋಚನೆ ಸಭೆ ಶನಿವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ತುಮಕೂರು ಕೊಳೆಗೇರಿ ನಿವಾಸಿಗಳ ಸಮಿತಿ ನೇತೃತ್ವದಲ್ಲಿ ನಡೆಯಿತು.

ನಗರ ವಂಚಿತ ಸಮುದಾಯಗಳ ಜನಸಂಖ್ಯೆಗೆ ತಕ್ಕಂತೆ ಅಭಿವೃದ್ಧಿ ಯೋಜನೆಗೆ ಕೇವಲ ಶೇ 2ರಷ್ಟು ಹಣ ಮಾತ್ರ ಮೀಸಲಿಡಲಾಗಿದೆ. ಇದು ಅಸಮಾನತೆಯಿಂದ ಕೂಡಿದೆ. ಸ್ಥಳೀಯ ಸಂಸ್ಥೆಗಳು ಮಾಡಲೇಬೇಕಾದ ಹೊಣೆಗಾರಿಕೆ ಕೆಲಸಗಳನ್ನು ಪರ್ಯಾಯ ಸಂಸ್ಥೆಗಳು ಮಾಡಲು ಹೊರಟಿರುವುದು ಸಂವಿಧಾನ ವಿರೋಧಿ ಎಂದು ಸಭೆಯಲ್ಲಿ ಖಂಡಿಸಲಾಯಿತು.

ಸೇವಾ ವಲಯಗಳಿಗೆ ಬಂಡವಾಳ ಹೂಡಿ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಇಲ್ಲಿ ಅಡಗಿದೆ. ಕೆಲವೇ ಕೆಲ ವರ್ಗಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದು, ಇದು ಸ್ಮಾರ್ಟ್ ಹೇಗಾಗುತ್ತದೆ ಎಂದು ಅಸಮಾಧಾನ ವ್ಯಕ್ತವಾಯಿತು.

ADVERTISEMENT

ಮಾರಿಯಮ್ಮ ಕೊಳಚೆ ಪ್ರದೇಶ ನಿವಾಸಿಗಳಿಗೆ ಬಾಳನಕಟ್ಟೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಕೆಲವರು ವಿರೋಧಿಸಿದ್ದಾರೆ. ಅನುಮೋದನೆ ಗೊಂಡ ಜಾಗದಲ್ಲಿಯೇ ವಸತಿ ನಿರ್ಮಿಸಬೇಕು. ಬೀದಿ ಬದಿ ವ್ಯಾಪಾರಿ ವಲಯ ಅಭಿವೃದ್ಧಿ, ವಾರ್ಡ್ ಸಮಿತಿ ರಚನೆ, ಬಡಜನರಿಗೆ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವ ಸಮಗ್ರತೆಯ ಕೊರತೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಂಡು ಬರುತ್ತಿದೆ ಎಂದು ಕಳವಳ ವ್ಯಕ್ತವಾಯಿತು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ದೊರೈರಾಜ್, ಪಾಲಿಕೆ ಸದಸ್ಯ ಲಕ್ಷ್ಮಿ ನರಸಿಂಹರಾಜು, ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಮುಜೀಬ್, ವಿದ್ಯಾರ್ಥಿ ಸಂಘಟನೆ ಮುಖಂಡ ರಾಘವೇಂದ್ರ, ಅನಿಲ್‌ ಚಿಕ್ಕದಾಳವಟ್ಟ, ಬೀದಿ ಬದಿ ವ್ಯಾಪಾರಿಗಳ ಮುಖಂಡ ಮಹಮ್ಮದ್ ಹಫೀಜುಲ್ಲಾ, ಸಮುದಾಯ ಸಂಘಟನೆಯ ಕೆ.ಇ.ಸಿದ್ಧಯ್ಯ, ಮಾದಿಗ ಪ್ರಚಾರ ಸಮಿತಿಯ ಕುಮಾರ್ ಮಾದರ್, ಕೊಳೆಗೇರಿ ಸಮಿತಿ ಶೆಟ್ಟಾಳಯ್ಯ, ಅರುಣ್, ರಘು, ಗಂಗಮ್ಮ, ರಜಿಯಾಬಿ, ದೊಡ್ಡ ರಂಗಯ್ಯ, ಶಂಕರಪ್ಪ, ಚಕ್ರಪಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.