ತುಮಕೂರು: ‘ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ರೈತರು, ಕಾರ್ಮಿಕರು, ನೌಕರರು ಹಾಗೂ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದರಿಂದ ಮಾತ್ರ ಸ್ಥಗಿತಗೊಂಡಿರುವ ಮಾರುಕಟ್ಟೆಯಲ್ಲಿ ಚಲನಶೀಲತೆಯನ್ನು ತರಲು ಸಾಧ್ಯ’ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.
ನಗರದ ಜನಚಳವಳಿ ಕೇಂದ್ರದಲ್ಲಿ ಸಿಐಟಿಯು ತಾಲ್ಲೂಕು ಸಮಿತಿಯು ಆಯೋಜಿಸಿದ್ಧ ’ಸಮಕಾಲೀನ ಸಂದರ್ಭದಲ್ಲಿ ಕಾರ್ಮಿಕರ ಮುಂದಿರುವ ಸವಾಲುಗಳು’ ಎಂಬ ವಿಷಯ ಕುರಿತು ಮಾತನಾಡಿದರು.
ಸಂಪತ್ತಿನ ಕೇಂದ್ರೀಕರಣದ ಬದಲಾಗಿ ದುಡಿಯುವ ಜನರಿಗೆ ನ್ಯಾಯಯೋಚಿತವಾದ ಕೂಲಿ ನೀಡಬೇಕು. ಇದು ಸಮಾಜದ ಆರ್ಥಿಕ ಚೇತರಿಕೆ ದೃಷ್ಟಿಯಿಂದ ಅಗತ್ಯ ಎಂದು ಪ್ರತಿಪಾದಿಸಿದರು.
‘ಹಲವು ಧೀಮಂತರ ಹೋರಾಟಗಳ ಭಾಗವಾಗಿ ರೂಪಿಸಲಾಗಿರುವ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಬಂಡವಾಳಗಾರರಿಗಷ್ಟೇ ಲಾಭದಾಯಕವಾಗಿದ್ದು, ದುಡಿಯುವ ಜನರ ಹಕ್ಕು ಕಸಿಯುವುದಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸಂಸತ್ತಿನ ಒಳಗೆ ದುಡಿಯುವ ಜನರ ಪರ ಮಾತನಾಡುವ ಜನಪ್ರತಿನಿಧಿಗಳ ಸಂಖ್ಯೆ ಕುಸಿದಿದೆ. ದುಡಿಯುವ ಜನ ರಾಜಕೀಯ ಪ್ರಜ್ಞೆ ಪಡೆಯದೇ ತಮ್ಮ ಮೇಲಿನ ದಾಳಿ, ದಬ್ಬಾಳಿಕೆ ಮತ್ತು ಅನ್ಯಾಯ ಅಂತ್ಯಗೊಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್, ಜೆಮ್ ಪ್ರಾಪರ್ಟಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಾಜಣ್ಣ, ಫಿಟ್ವೆಲ್ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಜಿತ್, ಎಂಎಚ್ಎಂಐ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಘುನಾಥ್, ತ್ರಿವೇಣಿ ಏರೋನಾಟಿಕ್ ಕಾರ್ಮಿಕ ಸಂಘಟನೆಯ ಮಂಜುನಾಥ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಸುಬ್ರಮಣ್ಯ ಇದ್ದರು.
ಅಧ್ಯಕ್ಷತೆಯನ್ನು ಸಿಐಟಿಯು ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ ವಹಿಸಿದ್ದರು. ಪುಟ್ಟೇಗೌಡ ಸ್ವಾಗತಿಸಿದರು. ಶಿವಕುಮಾರಸ್ವಾಮಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.