ತುಮಕೂರು: ರಾಜ್ಯದ ವಿಶೇಷ ಶಾಲಾ ಶಿಕ್ಷಕರ ಗೌರವಧನವನ್ನು ಹೆಚ್ಚಿಸುವಂತೆ ಆಗ್ರಹಿಸಿ ಈ ಶಾಲೆಗಳ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.
2010–11ನೇ ಸಾಲಿನಲ್ಲಿ ಸರ್ಕಾರವು ‘ಶಿಶು ಕೇಂದ್ರಿತ ಸಹಾಯಧನ ಯೋಜನೆ’ ಎನ್ನುವ ಅನುದಾನ ನೀತಿ ಜಾರಿಗೊಳಿಸಿತು. ವಿಶೇಷ ಶಿಕ್ಷಕರಿಗೆ ₹ 6,500 ಮತ್ತು ಇತರ ಸಿಬ್ಬಂದಿಗೆ ₹ 4,000 ದಿಂದ ₹ 5,000 ಗೌರವಧನ ನೀಡಲಾಗುತ್ತಿತ್ತು. 2013–14ರಲ್ಲಿ ವಿಶೇಷ ಶಿಕ್ಷಕರ ಗೌರವ ಧನವನ್ನು ₹ 13,500ಕ್ಕೆ ಹೆಚ್ಚಿಸಲಾಯಿತು. ಇತರ ಸಿಬ್ಬಂದಿಗೆ ₹ 8,000ದಿಂದ ₹ 9,000ಕ್ಕೆ ಗೌರವಧನ ಹೆಚ್ಚಿಸಲಾಯಿತು. ಆದರೆ, 2014ರಿಂದ ಇಲ್ಲಿಯವರೆಗೂ ವಿಶೇಷ ಶಿಕ್ಷಕರಿಗೆ ಮತ್ತು ಇತರ ಸಿಬ್ಬಂದಿಗೆ ನೀಡುತ್ತಿರುವ ಗೌರವಧನವನ್ನು ಹೆಚ್ಚಿಸಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ‘ಶಿಶು ಕೇಂದ್ರಿತ ಸಹಾಯಧನ ಯೋಜನೆ’ಯಡಿ ರಾಜ್ಯದಲ್ಲಿ 141 ವಿಶೇಷ ಶಾಲೆಗಳು ಅನುದಾನ ಪಡೆಯುತ್ತಿವೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕನಿಷ್ಠ ವೇತನ ಸಹ ದೊರೆಯುತ್ತಿಲ್ಲ. ಸಿಬ್ಬಂದಿ ಮತ್ತು ಅವರ ಕುಟುಂಬಗಳ ಬದುಕು ದುಸ್ತರವಾಗಿದೆ. ಈ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ ಅಸಮಾಧಾನ ತೋಡಿಕೊಂಡರು..
‘ಸಂಘದಿಂದ ಆಯಾ ಜಿಲ್ಲೆಯಲ್ಲಿ ಮುಷ್ಕರ ಹಮ್ಮಿಕೊಂಡಿದ್ದೇವೆ. ಸಾಮಾನ್ಯ ಶಿಕ್ಷಕರಿಗೆ ದೊರೆಯುವ ಸೌಲಭ್ಯಗಳನ್ನು ನಮಗೆ ಕೊಡಬೇಕು. ಗೌರವಧನವನ್ನು ದ್ವಿಗುಣಗೊಳಿಸಬೇಕು. ಇಲ್ಲದಿದ್ದರೆ 2021ರ ಜನವರಿಯಲ್ಲಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಜಿಲ್ಲಾ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದ ಕಾರ್ಯದರ್ಶಿ ಪ್ರಮೀಳಾ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.