ADVERTISEMENT

ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:06 IST
Last Updated 25 ನವೆಂಬರ್ 2021, 2:06 IST
ತಿಪಟೂರು ತಾಲ್ಲೂಕಿನ ಕೆರೆಗೋಡಿ ಗ್ರಾಮದ ಬಳಿಯಲ್ಲಿ ಬಸ್‌ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು
ತಿಪಟೂರು ತಾಲ್ಲೂಕಿನ ಕೆರೆಗೋಡಿ ಗ್ರಾಮದ ಬಳಿಯಲ್ಲಿ ಬಸ್‌ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು   

ತಿಪಟೂರು: ಸಮರ್ಪಕ ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ತಾಲ್ಲೂಕಿನ ಕಸಬಾ ಹೋಬಳಿ ಕೆರೆಗೋಡಿ ಗ್ರಾಮದ ಬಳಿ ಬುಧವಾರ ವಿದ್ಯಾರ್ಥಿಗಳು, ಗ್ರಾಮಸ್ಥರು ಎರಡು ಬಸ್‍ಗಳನ್ನು ತಡೆದು ಬುಧವಾರ ಪ್ರತಿಭಟಿಸಿದರು.

ತಿಪಟೂರು– ಕೆರೆಗೋಡಿ- ದಸರೀಘಟ್ಟ ಮಾರ್ಗವಾಗಿ ಅನೇಕ ಕೆಎಸ್‌ಆರ್‌ಟಿಸಿ ಬಸ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಆದರೆ ಇತ್ತೀಚಿಗೆ ಬಸ್‍ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಬರುವ ಒಂದೆರೆಡು ಬಸ್‌ಗೆ ನೂರಾರು ವಿದ್ಯಾರ್ಥಿಗಳು ಹತ್ತುತ್ತಾರೆ. ಕೆರೆಗೋಡಿ ಗ್ರಾಮದಲ್ಲಿ ನಿಲುಗಡೆ ನೀಡದೆ ತೆರಳುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂದು ಪ್ರತಿಭಟನೆ ನಿರತರು ದೂರಿದರು.

ಕೆರೆಗೋಡಿ ಗ್ರಾಮಸ್ಥ ಸ್ವಾಮಿ ಮಾತನಾಡಿ, ಹಲವು ಬಾರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತಂದರೂ, ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆಯನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಇಲ್ಲದೇ ಸರಿಯಾದ ಸಮಯಕ್ಕೆ ಶಾಲೆ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕೆರೆಗೋಡಿ, ಅನಗೊಂಡನಹಳ್ಳಿ ಗ್ರಾಮಗಳ ಬಳಿ ಬಸ್ ನಿಲುಗಡೆ ನೀಡುವುದಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದರು.‌

ADVERTISEMENT

ಹಲವು ದಿನಗಳಿಂದ ಸಮಸ್ಯೆ ಇದ್ದು, ಬಸ್‌ ನಿಲ್ದಾಣದಲ್ಲಿ ಮಾಹಿತಿ ನಿಡಿದ್ದರೂ ಪ್ರಯೋಜನವಾಗಿಲ್ಲ. ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ. ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿನಿಯೊಬ್ಬರು
ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.