ADVERTISEMENT

ತುಮಕೂರು |ಹೂವು, ಹಣ್ಣು, ಸಕ್ಕರೆ ದುಬಾರಿ: ಬೀನ್ಸ್, ಸೊಪ್ಪು ಏರಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 8:20 IST
Last Updated 30 ಮಾರ್ಚ್ 2025, 8:20 IST
ತುಮಕೂರಿನ ಮಾರುಕಟ್ಟೆಯಲ್ಲಿ ಶನಿವಾರ ಮಾವು, ಬೇವಿನ ಸೊಪ್ಪು ಖರೀದಿ
ತುಮಕೂರಿನ ಮಾರುಕಟ್ಟೆಯಲ್ಲಿ ಶನಿವಾರ ಮಾವು, ಬೇವಿನ ಸೊಪ್ಪು ಖರೀದಿ   

ತುಮಕೂರು: ಯುಗಾದಿ ಹಬ್ಬದ ಮುನ್ನ ದಿನವಾದ ಶನಿವಾರ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು. ಜನರು ಹಬ್ಬಕ್ಕೆ ಬೇಕಾದ ಮಾವು, ಬೇವಿನ ಸೊಪ್ಪು, ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು. 

ಪ್ರಮುಖವಾಗಿ ಹೂವಿನ ಬೆಲೆ ಗಗನಕ್ಕೇರಿತ್ತು. ಸೇವಂತಿಗೆ ಕೆ.ಜಿ ₹250–300, ಕನಕಾಂಬರ ಕೆ.ಜಿ ₹300–350, ಚೆಂಡು ಹೂ ಕೆ.ಜಿ ₹50 ದಾಟಿತ್ತು.

ಮಾರುಕಟ್ಟೆಯಲ್ಲಿ ಬೀನ್ಸ್ ದುಬಾರಿಯಾಗಿದ್ದರೆ, ಇತರ ತರಕಾರಿಗಳು ಅಗ್ಗವಾಗಿದ್ದವು. ಸೊಪ್ಪಿನ ದರ ಅಲ್ಪ ಚೇತರಿಸಿದ್ದು, ಈರುಳ್ಳಿ ಇಳಿಕೆ ದಾಖಲಿಸಿತ್ತು. ಧಾನ್ಯ, ಬೇಳೆ ಕೊಂಚ ಕಡಿಮೆಯಾಗಿದ್ದು, ಸಕ್ಕರೆ, ಹಣ್ಣು, ಕೋಳಿ, ಮೀನು ಸಹ ಹೆಚ್ಚಳವಾಗಿದೆ.

ADVERTISEMENT

ಯುಗಾದಿ ಹಬ್ಬದ ಹೊತ್ತಿನಲ್ಲೇ ಬೀನ್ಸ್ ಬೆಲೆ ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹50–60ಕ್ಕೆ ತಲುಪಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಿದೆ. ಕ್ಯಾರೇಟ್, ಮೂಲಂಗಿ, ಬೆಂಡೆಕಾಯಿ, ಬದನೆಕಾಯಿ, ಎಲೆಕೋಸು, ತೊಂಡೆಕಾಯಿ, ಹಾಗಲಕಾಯಿ ಇಳಿಕೆಯಾಗಿದೆ. ಒಂದು ಕಾಲದಲ್ಲಿ ಕೆ.ಜಿ ₹400ರ ಗಡಿ ದಾಟಿದ್ದ ನುಗ್ಗೆಕಾಯಿ ಈಗ ಕೇಳುವವರೇ ಇಲ್ಲವಾಗಿದ್ದು, ಕೆ.ಜಿ ₹20–25ಕ್ಕೆ ಕುಸಿದಿದೆ. ಹಸಿರುಮೆಣಸಿನಕಾಯಿ ಕೊಂಚ ತಗ್ಗಿದ್ದರೆ, ಕ್ಯಾಪ್ಸಿಕಂ ಏರಿಕೆಯಾಗಿದೆ.

ಎರಡು ವಾರಗಳ ಹಿಂದೆ ದಿಢೀರ್ ಹೆಚ್ಚಳವಾಗಿದ್ದ ಈರುಳ್ಳಿ ಈಗ ಇಳಿಕೆಯಾಗಿದೆ. ಬೆಳ್ಳುಳ್ಳಿ ಸಹ ಅದೇ ದಾರಿಯಲ್ಲಿ ಸಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ ಮತ್ತಷ್ಟು ದುಬಾರಿಯಾಗಿದೆ.

ಸೊಪ್ಪು ಚೇತರಿಕೆ: ಹಬ್ಬದ ವೇಳೆಗೆ ಸೊಪ್ಪು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಂತೆ ಕಾಣುತ್ತದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಸೊಪ್ಪು ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹25–30, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆಯಾಗಿದೆ.

ಹಣ್ಣು ದುಬಾರಿ: ಯುಗಾದಿ ಹಬ್ಬ ಹಾಗೂ ಬೇಸಿಗೆಯಿಂದಾಗಿ ಹಣ್ಣುಗಳ ಧಾರಣೆ ಮತ್ತಷ್ಟು ದುಬಾರಿಯಾಗಿದೆ. ಸೇಬು, ಕಿತ್ತಳೆ, ಸೀಬೆ, ಕರಬೂಜ ಏರಿಕೆ ದಾಖಲಿಸಿವೆ. ಬಾಳೆಹಣ್ಣು ಇಳಿಕೆಯತ್ತ ಮುಖ ಮಾಡಿದ್ದು, ಪಪ್ಪಾಯ ಅಲ್ಪ ಕಡಿಮೆಯಾಗಿದೆ.

ಅಡುಗೆ ಎಣ್ಣೆ ಇಳಿಕೆ: ಅಡುಗೆ ಎಣ್ಣೆ ಬೆಲೆ ಕೊಂಚ ತಗ್ಗಿದ್ದು, ಗೋಲ್ಡ್‌ವಿನ್ನರ್ ಕೆ.ಜಿ ₹146–147, ಪಾಮಾಯಿಲ್ ಕೆ.ಜಿ ₹127–128ಕ್ಕೆ ಇಳಿಕೆಯಾಗಿದ್ದರೆ, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಏರಿಕೆಯಾಗಿದೆ.

ಸಕ್ಕರೆ ಏರಿಕೆ: ಸಕ್ಕರೆ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದ್ದು, ಕೆ.ಜಿ ₹43–44ಕ್ಕೆ ಜಿಗಿದಿದೆ. ಬೇಳೆ, ಧಾನ್ಯಗಳ ಧಾರಣೆ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ. ತೊಗರಿ ಬೇಳೆ ಕೆ.ಜಿಗೆ ₹5–10 ಇಳಿಕೆಯಾಗಿದ್ದು, ಕಡಲೆ ಬೇಳೆ, ಅಲಸಂದೆ, ಅವರೆಕಾಳು, ಹುರುಳಿಕಾಳು ಕಡಿಮೆಯಾಗಿದೆ. ಉದ್ದಿನ ಬೇಳೆ ತುಸು ಹೆಚ್ಚಳವಾಗಿದೆ.

ಮಸಾಲೆ ಪದಾರ್ಥ: ಮೆಣಸಿನ ಕಾಯಿ ಹಾಗೂ ಒಣ ಹಣ್ಣುಗಳಲ್ಲಿ ದ್ರಾಕ್ಷಿ ಸಾಕಷ್ಟು ದುಬಾರಿಯಾಗಿದೆ. ಲವಂಗ, ಬಾದಾಮಿ ಸಹ ಏರಿಕೆಯಾಗಿದೆ.

ಧನ್ಯ ಕೆ.ಜಿ ₹100–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹165–175, ಹುಣಸೆಹಣ್ಣು ₹160–180, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹720–740, ಜೀರಿಗೆ ಕೆ.ಜಿ ₹260–270, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹3,300–3,500, ಬಾದಾಮಿ ಕೆ.ಜಿ ₹820–840, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹300–320ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಹೆಚ್ಚಳ: ರಂಜಾನ್, ಯುಗಾದಿ ಹಬ್ಬ ಒಮ್ಮೆಲೆ ಬಂದಿದ್ದು, ಕೋಳಿ ಮಾಂಸ ಏರಿಕೆಯತ್ತ ಮುಖ ಮಾಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಹೆಚ್ಚಿಸಲಾಗಿದೆ.

ಮೀನು: ಮೀನಿನ ಧಾರಣೆಯೂ ದುಬಾರಿ ಸ್ಥಿತಿಯಲ್ಲೇ ಇದೆ. ಬಂಗುಡೆ ಕೆ.ಜಿ ₹280, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹1,130, ಬಿಳಿಮಾಂಜಿ ಕೆ.ಜಿ ₹1,250, ಕಪ್ಪುಮಾಂಜಿ ಕೆ.ಜಿ ₹780, ಸೀಗಡಿ ಕೆ.ಜಿ ₹510–720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.