ADVERTISEMENT

ಚಿಕ್ಕನಾಯಕನಹಳ್ಳಿ: ನೀರಿನಲ್ಲಿ ಮುಳುಗಿದ ಬದುಕು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 8:22 IST
Last Updated 7 ಅಕ್ಟೋಬರ್ 2021, 8:22 IST
ಗುಡಿಸಲಿಗೆ ನುಗ್ಗಿದ್ದ ನೀರನ್ನು ಹೊರಹಾಕಲಾಗುತ್ತಿದೆ
ಗುಡಿಸಲಿಗೆ ನುಗ್ಗಿದ್ದ ನೀರನ್ನು ಹೊರಹಾಕಲಾಗುತ್ತಿದೆ   

ಚಿಕ್ಕನಾಯಕನಹಳ್ಳಿ: ಪಟ್ಟಣದ ಹೊರವಲಯದ ಗುಂಡುತೋಪಿನಲ್ಲಿ ವಾಸವಿರುವ ಅಲೆಮಾರಿಗಳ ಗುಡಿಸಲುಗಳಿಗೆ ನೀರು ನುಗ್ಗಿ ಅವರ ಬದುಕು ನೀರಿನಲ್ಲಿ ಮುಳುಗಿ ಹೋಗಿದೆ.

ಸುಮಾರು ಮೂರು ದಶಕಗಳಿಂದ ವಾಸವಿರುವ ಸುಡುಗಾಡು ಸಿದ್ಧರಿಗೆ ಇಂದಿಗೂ ಮೂಲ ಸೌಲಭ್ಯಗಳು ದೊರಕಿಲ್ಲ. ಗುಡಿಸಲಿನಲ್ಲಿ ವಾಸವಿದ್ದು ಪ್ರತಿ ಬಾರಿ ಮಳೆ ಬಂದಾಗಲೂ ಇವರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಎರಡು ದಿನಗಳಿಂದ ಸುರಿದ ಮಳೆಗೆ ಗುಡಿಸಲುಗಳು ನೀರಿನಿಂದ ಆವೃತವಾಗಿವೆ. ಗುಂಡುತೋಪಿನಲ್ಲಿ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ರಸ್ತೆಯಂತಹ ಮೂಲ ಸೌಕರ್ಯ ಮರೀಚಿಕೆಯಾಗಿವೆ.

ಹಾವು, ಚೇಳು, ಸೊಳ್ಳೆಗಳೊಂದಿಗೆ ಕಾಲ ನೂಕುವಂತಾಗಿದೆ ಎಂದು ಎಂದು ಸ್ಥಳೀಯರು ದೂರುತ್ತಾರೆ. ಎಷ್ಟೊ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಸಣ್ಣಪುಟ್ಟ ವ್ಯಾಪಾರ, ಹಂದಿ ಸಾಕಾಣಿಕೆ, ಭಿಕ್ಷಾಟನೆಯಿಂದ ಇವರು ಬದುಕು ಸಾಗಿಸುತ್ತಿದ್ದಾರೆ. ಈಗಾಗಲೇ ಬೇರೆ ಕಡೆ ಹಕ್ಕುಪತ್ರ ವಿತರಣೆ ಮಾಡಿದ್ದರೂ, ಅಲ್ಲಿಯೂ ಮೂಲ ಸೌಕರ್ಯ ಒದಗಿಸಿಲ್ಲ ಎಂಬ ದೂರು ಕೇಳಿ ಬರುತ್ತಿದೆ.

ADVERTISEMENT

ಮಧುಗಿರಿಯಲ್ಲಿ ಉತ್ತಮ ಮಳೆ:ಮಧುಗಿರಿ ತಾಲ್ಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದ್ದು ರೈತರ ಮುಖದಲ್ಲಿ ಸಂತಸ ಮೂಡಿದೆ.

ಮಂಗಳವಾರ ರಾತ್ರಿ ಪ್ರಾರಂಭವಾದ ಮಳೆ ಬುಧವಾರ ರಾತ್ರಿಯವರೆಗೂ ಮುಂದುವರೆದಿತ್ತು.

ಶೇಂಗಾ, ರಾಗಿ, ಮುಸುಕಿನ ಜೋಳದ ಬೆಳೆಗಳಿಗೆ ಮಳೆಯಿಲ್ಲದೆ ಒಣಗುವ ಸ್ಥಿತಿ ತಲುಪಿದ್ದವು. ಮಂಗಳವಾರ ಹಾಗೂ ಬುಧವಾರ ಸುರಿದ ಮಳೆಗೆ ಭೂಮಿ ತಂಪಾಗಿದೆ.

ಕೆಲವು ದಿನಗಳ ಹಿಂದೆ ಈ ಮಳೆ ಬಿದ್ದಿದ್ದರೆ ಉತ್ತಮ ಬೆಳೆಯಾಗುತ್ತಿತ್ತು ಎಂದು ರೈತ ಗೋಪಾಲಯ್ಯ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.