ಪಟ್ಟನಾಯಕನಹಳ್ಳಿ: ‘ಮದಲೂರು ಕೆರೆಗೆನವೆಂಬರ್ 25ರೊಳಗೆ ನೀರು ತುಂಬಿಸಲಾಗುವುದು’ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಭರವಸೆ ನೀಡಿದರು.
ಪಟ್ಟನಾಯಕನಹಳ್ಳಿ ಮತ್ತು ಕಾಮಗೊಂಡನಹಳ್ಳಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೇಮಾವತಿ ಜಲಾಶಯ ಈಗಲೂ ಭರ್ತಿಯಾಗಿದೆ. ಇದರಿಂದಾಗಿ ತಾಲ್ಲೂಕಿಗೆ ಹೇಮಾವತಿ ನೀರು ಮದಲೂರು ಮತ್ತು ಮಾರ್ಗಮಧ್ಯದಲ್ಲಿ ಬರುವ 11 ಕೆರೆಗಳಿಗೆ ಹರಿಯುವುದರಲ್ಲಿ ಯಾವುದೇ ಅನುಮಾನ ಬೇಡ. ಜನರ ಆಶೀರ್ವಾದದ ಮೂಲಕ ನೀರು ತುಂಬಿಸುತ್ತೇನೆ’ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹ 859 ಕೋಟಿ ಅನುದಾನ ತಂದ ನನಗೆ ಈಗ ಅನುದಾನ ತರಲು ಕಷ್ಟವಿಲ್ಲ. ಕೇಂದ್ರ ಸರ್ಕಾರದಿಂದಲೇ ವಿವಿಧ ಯೋಜನೆಯಡಿ ₹ 500 ಕೋಟಿ ಅನುದಾನ ತರಲು ಈಗಾಗಲೇ ಕಾರ್ಯಯೋಜನೆ ರೂಪಿಸಿದ್ದೇನೆ. ಮುಂದಿನ ಆರು ತಿಂಗಳಿನಲ್ಲಿ ಕ್ಷೇತ್ರಕ್ಕೆ ₹ 1 ಸಾವಿರ ಕೋಟಿ ಅನುದಾನ ತರುತ್ತೇನೆ ಎಂದು ತಿಳಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್. ಮಂಜುನಾಥ್, ಹೆಂದೊರೆ ತಾ.ಪಂ. ಸದಸ್ಯ ಕೆ.ಎಂ. ಶ್ರೀನಿವಾಸ್, ಮುಖಂಡರಾದ ಕೆ.ಎನ್. ಮಂಜುನಾಥ್, ಪದ್ಮರಾಜ್, ರಾಜಣ್ಣ, ಗಣೇಶ್, ಸುರೇಶ್, ತುಳಸಿರಾಮ್, ಪರಮೇಶ್ವರ, ಮಂಜುನಾಥ್, ರಂಗನಾಥ್, ಲಕ್ಷ್ಮಿದೇವಮ್ಮ, ದಾವೂದ್ ಖಾನ್, ಲಿಂಗರಾಜ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.