ADVERTISEMENT

‘ಕೃಷಿ ಬಿಕ್ಕಟ್ಟು ಸೃಷ್ಟಿಸಿದ ಕೇಂದ್ರ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 5:42 IST
Last Updated 9 ಡಿಸೆಂಬರ್ 2020, 5:42 IST
ತುರುವೇಕೆರೆ ತಾಲ್ಲೂಕಿನ ವಿವಿಧ ರೈತ ಸಂಘಟನೆಗಳು ತಹಶೀಲ್ದಾರ್ ಆರ್.ನಯಿಂ ಉನ್ನಿಸಾ ಅವರಿಗೆ ಮನವಿ ಸಲ್ಲಿಸಿದರು
ತುರುವೇಕೆರೆ ತಾಲ್ಲೂಕಿನ ವಿವಿಧ ರೈತ ಸಂಘಟನೆಗಳು ತಹಶೀಲ್ದಾರ್ ಆರ್.ನಯಿಂ ಉನ್ನಿಸಾ ಅವರಿಗೆ ಮನವಿ ಸಲ್ಲಿಸಿದರು   

ತುರುವೇಕೆರೆ: ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳ ಜಾರಿ ಮಾಡಿರುವುದನ್ನು ವಿರೋಧಿಸಿ ಭಾರತ್ ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ತಾಲ್ಲೂಕಿನ ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಅಸ್ಲಾಂಪಾಷ ಮಾತನಾಡಿ, ‘ಕಳೆದ 30 ವರ್ಷಗಳಲ್ಲಿನ ಜಾಗತಿಕರಣ, ಉದಾರೀಕರಣ, ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಕೃಷಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಸುಮಾರು 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ಇಡೀ ಜಗತ್ತನ್ನೇ ಆವರಿಸಿರುವ ಕೊರೊನಾದಿಂದ ಗ್ರಾಮೀಣ ಭಾಗದ ಜನತೆ ಅಪಾರ ಕಷ್ಟ– ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಕಾಯ್ದೆಗಳನ್ನು ತರುವ ಅಗತ್ಯವಿರಲಿಲ್ಲ. ಕೇಂದ್ರ ಸರ್ಕಾರ ಕೇವಲ ಬಂಡವಾಳಶಾಯಿ ಕಂಪನಿಗಳ ಪರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ರೈತ ಸಂಘ, ಹಸಿರು ಸೇನೆ, ಸಿಐಟಿಯು, ಕಟ್ಟಡ ಕಾರ್ಮಿಕರ ಸಂಘ, ಕನ್ನಡಪರ ಸಂಘಟನೆ, ಕಿಸಾನ್ ಕಾಂಗ್ರೆಸ್ ಘಟಕ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಬಾಣಸಂದ್ರ ವೃತ್ತದಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ನಂತರ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಆರ್.ನಯಿಂ ಉನ್ನಿಸಾ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಮತ್ ಉಲ್ಲಾ, ಜಾಫರ್, ನಾಗಣ್ಣ, ಡ್ಯಾನಿಯಲ್, ಚಂದ್ರಶೇಖರ್, ಸ್ವರ್ಣಕುಮಾರ್, ಸಿಐಟಿಯು ಸತೀಶ್, ಮಂಜುನಾಥ್, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ ರೈತ ಮಹಿಳೆ ಜ್ಯೋತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.