ADVERTISEMENT

ಜಿಲ್ಲೆಯ ಭೂಮಿಯ ಮೇಲೆ ಹೊರಗಿನವರ ಕಣ್ಣು !

ಜಮೀನು ಖರೀದಿಗೆ ಬೆಂಗಳೂರಿಗರ ಲಗ್ಗೆ: ಹಳ್ಳಿಗಳಲ್ಲಿ ಹೆಚ್ಚಿದ ಮಧ್ಯವರ್ತಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 16 ಡಿಸೆಂಬರ್ 2020, 1:56 IST
Last Updated 16 ಡಿಸೆಂಬರ್ 2020, 1:56 IST

ತುಮಕೂರು: ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಯ ಪರಿಣಾಮ ಬೆಂಗಳೂರಿಗರು ಸೇರಿದಂತೆ ಹೊರರಾಜ್ಯದವರೂ ಜಮೀನು ಖರೀದಿಗೆ ತುಮಕೂರು ಜಿಲ್ಲೆಗೆ ಲಗ್ಗೆ ಇಡುತ್ತಿದ್ದಾರೆ.

ರೈತರಲ್ಲದವರೂ ಭೂಮಿ ಖರೀದಿಸಲು ಇದ್ದ ನಿರ್ಬಂಧಗಳು ಸಡಿಲವಾದ ಪರಿಣಾಮ ಮತ್ತು ಮತ್ತೆ ಏನಾದರೂ ಈ ತಿದ್ದುಪಡಿ ಕಾಯ್ದೆ ಬದಲಾದರೆ ಖರೀದಿಗೆ ಅವಕಾಶ ಕಷ್ಟಸಾಧ್ಯ ಎಂದು ಜಿಲ್ಲೆಯ ಜಮೀನುಗಳಿಗೆ ಹೊರಗಿನವರು ಮುಗಿಬಿದ್ದಿದ್ದಾರೆ.

ಕುಣಿಗಲ್, ತುಮಕೂರು ಬೆಂಗಳೂರಿನಿಂದ ಕೇವಲ 70 ಕಿಲೋ ಮೀಟರ್ ದೂರದಲ್ಲಿವೆ. ಕೊರಟಗೆರೆ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಿಗೆ ರಾಜಧಾನಿಯಿಂದ ಉತ್ತಮ ಸಾರಿಗೆ ಸಂಪರ್ಕ ಜಾಲ ಇರುವುದರಿಂದ ಸಹಜವಾಗಿ ಜಿಲ್ಲೆಯ ಜಮೀನುಗಳಿಗೆ ಬೇಡಿಕೆ ಕುದುರಿದೆ.

ADVERTISEMENT

ಪ್ರತಿ ಹಳ್ಳಿಗಳಲ್ಲೂ ಜಮೀನು ಕೊಡಿಸುವ ಮಧ್ಯವರ್ತಿಗಳು ಹೇರಳವಾಗಿ ಹುಟ್ಟಿಕೊಂಡಿದ್ದಾರೆ. ಜಮೀನು ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ಮಧ್ಯವರ್ತಿಗಳು ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದಾರೆ. ಇಲ್ಲಿ ಜಮೀನಿನ ವಿಸ್ತೀರ್ಣ, ಬೆಲೆ, ಸಂಪರ್ಕ ಸಂಖ್ಯೆ ಮುಂತಾದ ಮಾಹಿತಿಗಳಿವೆ. ಮಧ್ಯವರ್ತಿಗಳು ವಾಟ್ಸ್‌ಆ್ಯಪ್ ಗ್ರೂಪ್‌ ಕೂಡ ರಚಿಸಿಕೊಂಡಿದ್ದಾರೆ.

ಮಧ್ಯವರ್ತಿಗಳ ಹಾವಳಿ:

ಜಮೀನು ಖರೀದಿಗೆ ಬರುವವರ ಸಂಖ್ಯೆ ಹೆಚ್ಚಿದಂತೆ ಮಧ್ಯವರ್ತಿಗಳು ರೈತರಿಂದ ತಮ್ಮ ಹೆಸರಿಗೆ ಮಾರಾಟ ಪತ್ರ (ಸೇಲ್ ಡೀಡ್‌) ಮಾಡಿಸಿಕೊಳ್ಳುತ್ತಿದ್ದಾರೆ. ರೈತರು ಮತ್ತು ಖರೀದಿದಾರರ ನಡುವೆ ‘ನೇರ ಸಂಪರ್ಕ’ ಇಲ್ಲದೆ ಮಧ್ಯವರ್ತಿಗಳ ಮೂಲಕ ಜಮೀನು ವಹಿವಾಟು ಕುದುರುತ್ತಿವೆ.

‘ಐದು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದು, ನಿವೇಶನ ಮಾರಾಟಕ್ಕೆ ಹೆಚ್ಚು ಗಮನ ನೀಡುತ್ತಿದ್ದೆ. ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಸುಳಿವು ದೊರೆಯುತ್ತಲೇ
ಕೃಷಿ ಜಮೀನುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನೆರೆಯ ಆಂಧ್ರಪ್ರದೇಶ ಸೇರಿದಂತೆ ರಾಜಸ್ಥಾನದಿಂದಲೂ ಹಲವರುಕರೆ ಮಾಡಿ ವಿಚಾರಿಸುತ್ತಿದ್ದಾರೆ’ ಎನ್ನುತ್ತಾರೆ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿರುವ ಮಧ್ಯವರ್ತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.