ಚಿಕ್ಕನಾಯಕನಹಳ್ಳಿ: ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ಆಕ್ರೋಶಗೊಂಡ ಪಟ್ಟಣದ ಮಾರುತಿ ನಗರದ ವೆಂಕಟಪ್ಪ (35) ಎಂಬಾತ ಶುಕ್ರವಾರ ರಾತ್ರಿ ತನ್ನ ತಂದೆ ಸಣ್ಣಯ್ಯ (62) ಅವರನ್ನೇ ಹತ್ಯೆ ಮಾಡಿದ್ದಾನೆ.
ಸಣ್ಣಯ್ಯ ಕೂಲಿ ಕೆಲಸ ಮಾಡುತ್ತಿದ್ದರು. ವೆಂಕಟಪ್ಪ ಲಾರಿ ಚಾಲಕನಾಗಿದ್ದ. ಸಣ್ಣಯ್ಯ ಅವರ ಜತೆ ಪದೇ ಪದೇ ವೆಂಕಟಪ್ಪ ಜಗಳವಾಡುತ್ತಿದ್ದ. ಇದರಿಂದ ಬೇಸರಗೊಂಡ ಆತನ ತಾಯಿ ಮತ್ತೊಬ್ಬರ ಮನೆಗೆ ಮಲಗಲು ತೆರಳಿದ್ದರು.
ನನಗೆ ಮದುವೆ ಮಾಡಲಿಲ್ಲ ಎಂದು ವೆಂಕಟಪ್ಪ ಜಗಳ ತೆಗೆದಿದ್ದು ನಂತರ ಕುಡಿಯಲು ಹಣ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹುಣೆಸೆಹಣ್ಣು ಬಿಡಿಸುವ ಮರದ ತುಂಡಿನಿಂದ ತಂದೆಯ ತಲೆಗೆ ಬಲವಾಗಿ ಹೊಡೆದು ಸಾಯಿಸಿದ್ದಾನೆ. ಬೆಳಿಗ್ಗೆ ಪಕ್ಕದ ಮನೆಯವರು ಸಣ್ಣಯ್ಯ ಅವರ ಪತ್ನಿ ತಾಯಮ್ಮ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಆರೋಪಿಯನ್ನು ಪಟ್ಟಣದ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಯಮ್ಮ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಮಿಕ ಸಾವು
ಕುಣಿಗಲ್: ಪಟ್ಟಣದಲ್ಲಿ ನಿರ್ಮಾಣ ಹಂತದ ಹೋಟೆಲ್ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕಸುಂದರ್ ರಾಜು (38) ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ.
ಸುಂದರ್ ರಾಜು ಮದ್ದೂರು ತಾಲ್ಲೂಕು ಸೋಮನಹಳ್ಳಿಯವರು. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.