ಕೊಡಿಗೇನಹಳ್ಳಿ: ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ವಿಠಲಪುರ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ವಿಠಲಾಪುರ ಗ್ರಾಮ ಪಕ್ಕದ ಸೀಮಾಂಧ್ರಕ್ಕೆ ಹೊಂದಿಕೊಂಡಿದ್ದು ಸೀಮಾಂಧ್ರದ ಪೆನುಗೊಂಡ, ಹಿಂದೂಪುರ, ಮಡಕಶಿರಾ ತಾಲ್ಲೂಕಿನಿಂದ ನೂರಾರು ಮದ್ಯವ್ಯಸನಿಗಳು ಬಂದು ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಾರೆ. ಇದರಿಂದ ಗ್ರಾಮದಲ್ಲಿರುವ ಮಹಿಳೆಯರು ಮಕ್ಕಳಿಗೆ ತೊಂದರೆಯಾಗಲಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಇಲಾಖೆ ಪರವಾನಗಿ ನೀಡಬಾರದು ಎಂದು ಅವರು ಒತ್ತಾಯಿಸಿದರು.
ಇಲ್ಲಿನ ಜನರು ಕೂಲಿಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಇಲ್ಲಿ ಈಗ ಮದ್ಯದಂಗಡಿ ತೆರೆದರೆ ಕುಟುಂಬಗಳು ಬೀದಿಗೆ ಬೀಳುವ ಸಂಭವವೇ ಹೆಚ್ಚಾಗಿದೆ. ಪರವಾನಗಿ ನೀಡಿದರೆ ಉಗ್ರ ಹೋರಾಟವನ್ನು ಮಾಡುವುದಾಗಿ ಗ್ರಾಮಸ್ಥರಾದ ಸುಬ್ರಹ್ಮಣ್ಯ, ಗಿರೀಶ, ಮಧುಸೂದನ್, ರವಿ, ಗಂಗಾಧರ್, ಮನೋಹರ ನರಸಿಂಹಮೂರ್ತಿ, ರಾಮಾಂಜಿ, ರತ್ನಮ್ಮ, ಪ್ರಮೀಳಾ, ಕಲಾವತಿ, ಲಕ್ಷ್ಮಮ್ಮ, ಪ್ರಭಾಕರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.