ADVERTISEMENT

ಹುಳಿಯಾರು: ಈ ಬಾರಿಯೂ ಗುರಿಮುಟ್ಟದ ಪೂರ್ವ ಮುಂಗಾರು ಬಿತ್ತನೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 12:53 IST
Last Updated 20 ಮೇ 2025, 12:53 IST
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಹೆಸರು ಬೆಳೆ
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಹೆಸರು ಬೆಳೆ   

ಹುಳಿಯಾರು: ಹೋಬಳಿಯಲ್ಲಿ ಮಳೆ ಕೊರತೆಯಿಂದ ಪೂರ್ವ ಮುಂಗಾರು ಬೆಳೆ ಹೆಸರು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಇದರಿಂದ ರೈತರ ಮುಂದಿನ ಕೃಷಿ ಚಟುವಟಿಕೆಗೆ ಆರ್ಥಿಕ ಸಂಕಷ್ಟ ಎದುರಾಗುವ ಚರ್ಚೆ ನಡೆಯುತ್ತಿದೆ.

ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ಪೂರ್ವ ಮುಂಗಾರಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೆಸರು ಪರಿಣಮಿಸಿತ್ತು. ಐದಾರು ವರ್ಷಗಳಿಂದ ಪೂರ್ವ ಮುಂಗಾರಿನಲ್ಲಿ ನಿರೀಕ್ಷಿತ ಮಳೆ ಬಾರದೆ ಬಿತ್ತನೆ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಹಿಂದಿನ ವರ್ಷಗಳಲ್ಲಿ ಯುಗಾದಿ ಹಬ್ಬದೊಳಗೆ ಮಳೆ ಬಂದು ಭೂಮಿಯನ್ನು ತಣಿಸುತ್ತಿತ್ತು. ನಂತರ ಭೂಮಿ ಸ್ವಚ್ಛಗೊಳಿಸಿ ಹಬ್ಬದ ತರುವಾಯ ಅಶ್ವಿನಿ ಹಾಗೂ ಭರಣಿ ಮಳೆಗೆ ಹೆಸರನ್ನು ಬಿತ್ತನೆ ಮಾಡುತ್ತಿದ್ದರು.

ಮುಂದಿನ ದಿನಗಳಲ್ಲಿ ಒಂದೆರಡು ಹದ ಮಳೆಯಾದರೆ ಹೆಸರು ಉತ್ತಮ ಬೆಳೆ ಬರುತ್ತಿತ್ತು. ಒಂದು ಎಕರೆ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಿ ನಾಲ್ಕೈದು ಕ್ವಿಂಟಲ್‌ ಹೆಸರು ಕಾಳು ಬೆಳೆಯುತ್ತಿದ್ದರು. ಉತ್ತಮ ಬೆಲೆಯೂ ಸಿಗುತ್ತಿದುದರಿಂದ ರೈತರಿಗೆ ಆರಂಭದಲ್ಲಿ ಹಣ ಬರುತ್ತಿತ್ತು. ಇದರಿಂದ ಮತ್ತೆ ಹಿಂಗಾರು ಬೆಳೆಗಳ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುತ್ತಿತ್ತು. ಆದರೆ ಈ ಬಾರಿಯೂ ನಾಲ್ಕೈದು ವರ್ಷಗಳ ಪರಿಸ್ಥಿತಿಯೇ ಪುನರಾವರ್ತನೆಯಾಗಿದ್ದು ಮಳೆ ಕೈ ಕೊಟ್ಟಿದೆ. ಹೆಸರು ಬಿತ್ತನೆಗೆ ಪೂರಕವಾದ ಅಶ್ವಿನಿ ಹಾಗೂ ಭರಣಿ ಭೂಮಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಲಿಲ್ಲ.

ADVERTISEMENT

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಬೆಳೆ ಹೆಸರು 3,890 ಹೆಕ್ಟೆರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಪ್ರಸಕ್ತವಾಗಿ 2,060 ಹೆಕ್ಟೆರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಲಸಂದೆ 1,320 ಹೆಕ್ಟೆರ್, ತೊಗರಿ 300 ಹೆಕ್ಟೆರ್‌, ಉದ್ದು 94 ಹೆಕ್ಟೆರ್‌, ಮೇವಿನ ಜೋಳ 1,180 ಹೆಕ್ಟೆರ್‌ ಬಿತ್ತನೆಯಾಗಿದೆ. ಎರಡು ವರ್ಷಗಳಿಂದ ಅಲಸಂದೆ ಬಿತ್ತನೆಯಲ್ಲಿ ಚೇತರಿಕೆ ಕಾಣುತ್ತಿದ್ದು ಪ್ರಸಕ್ತ ವರ್ಷವೂ ಹೆಚ್ಚು ಬಿತ್ತನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.