ತಿಪಟೂರು: ನಗರಸಭೆ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅಧ್ಯಕ್ಷರಾಗಿ ಪಿ.ಜೆ.ರಾಮಮೋಹನ್, ಉಪಾಧ್ಯಕ್ಷರಾಗಿ ಸೊಪ್ಪು ಗಣೇಶ್ ಆಯ್ಕೆಯಾಗಿದ್ದಾರೆ.
ಬಹುದಿನಗಳಿಂದ ತೀವ್ರ ಕುತೂಹಲ ಕೆರೆಳಸಿದ್ದ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿ 22 ಮತಗಳನ್ನು ಪಡೆಯುವ ಮೂಲಕ ಬಹುಮತ ಗಳಿಸಿತು. ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೇಘಶ್ರೀ ಭೂಷಣ್ ಸ್ಪರ್ಧಿಸಿದ್ದು, 10 ಮತಗಳನ್ನು ಪಡೆದರು.
ನಗರಸಭೆ ಚುನಾವಣೆಯಲ್ಲಿ ಒಟ್ಟು 31 ಸದಸ್ಯರಲ್ಲಿ ಒಬ್ಬರು ಸಾವನ್ನಪ್ಪಿರುವ ಕಾರಣ ಒಟ್ಟು 30 ಸ್ಥಾನ ಜತೆಗೆ ಶಾಸಕ ಮತ್ತು ಸಂಸದರ ಮತಗಳು ಸೇರಿ ಒಟ್ಟು 32 ಮತಗಳಿದ್ದವು. ಶಾಸಕ ಬಿ.ಸಿ.ನಾಗೇಶ್ ಮತ್ತು ಲೋಕೇಶ್ವರ ನಡುವಿನ ಹೊಂದಾಣಿಕೆಯಿಂದಾಗಿ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ದೊರೆಯಿತು. ಸಂಸದ ಜಿ.ಎಸ್.ಬಸವರಾಜು ಭಾಗವಹಿಸಿದ್ದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರ ಬಿಜೆಪಿ ಕಾರ್ಯಕರ್ತರು ತೆರೆದ ವಾಹನದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ನಂತರ ಗ್ರಾಮದೇವತೆ ಕೆಂಪಮ್ಮದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ತಿಪಟೂರಿನ ಅಭಿವೃದ್ಧಿ ಸಲುವಾಗಿ ನಗರಸಭೆಯಲ್ಲಿ ಒಂದಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದೇವೆ. ಅನೇಕ ವರ್ಷಗಳ ನಂತರ ಬಿಜೆಪಿಗೆ ಬಹುಮತ ನೀಡಿದ್ದರೂ, ಲೋಕೇಶ್ವರ ಹಾಗೂ ಪಕ್ಷೇತರರ ಸಹಕಾರದಿಂದಾಗಿ ಸುಲಭವಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದೇವೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, 6 ತಿಂಗಳ ಒಳಗಾಗಿ ಸಂಪೂರ್ಣ ರಸ್ತೆಗಳ ಅಭಿವೃದ್ಧಿಗೆ ಬದ್ಧ ಎಂದು ಶಾಸಕ ಬಿ.ಸಿ. ನಾಗೇಶ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.