ADVERTISEMENT

ತುಮಕೂರು: ಇನ್ನೂ ಆರಂಭವಾಗದ ರಾಗಿ ಖರೀದಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:35 IST
Last Updated 15 ಜನವರಿ 2026, 6:35 IST
ರಾಗಿ
ರಾಗಿ   

ತುಮಕೂರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಇನ್ನೂ ಆರಂಭವಾಗದೆ ರೈತರು ಪ್ರತಿನಿತ್ಯ ಖರೀದಿ ಕೇಂದ್ರಕ್ಕೆ ಎಡತಾಕುವುದು ತಪ್ಪಿಲ್ಲ. ಇನ್ನೂ ಎರಡು ವಾರಗಳ ಕಾಲ ಕಾಯಬೇಕಿದ್ದು, ಜನವರಿ ಅಂತ್ಯಕ್ಕೆ ಆರಂಭವಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ನಿಗದಿಯಂತೆ ಜನವರಿ 1ರಿಂದ ಖರೀದಿ ಆರಂಭವಾಗಿ, ಮಾರ್ಚ್ ಕೊನೆಗೆ ಮುಕ್ತಾಯವಾಗಬೇಕಿತ್ತು. ಈಗಿನ ಪರಿಸ್ಥಿತಿ ಗಮನಿಸಿದರೆ ಸದ್ಯಕ್ಕೆ ರಾಗಿ ಖರೀದಿ ಪ್ರಾರಂಭವಾಗುವ ಸೂಚನೆಗಳು ಕಾಣುತ್ತಿಲ್ಲ. ಪ್ರತಿನಿತ್ಯ ಖರೀದಿ ಕೇಂದ್ರಕ್ಕೆ ಬರುತ್ತಿರುವ ರೈತರು ‘ಯಾವಾಗ ರಾಗಿ ತರಬೇಕು’ ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಸಲವೂ ರಾಗಿ ತುಂಬಿಸಲು ಗೋಣಿ ಚೀಲಗಳ ಕೊರತೆ ಎದುರಾಗಿರುವುದು ಖರೀದಿ ಆರಂಭಿಸಲು ತಡವಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್ ತಿಂಗಳಲ್ಲೇ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಖರೀದಿ ಆರಂಭಿಸಲು ಮೂರು ತಿಂಗಳ ಕಾಲಾವಕಾಶ ಇತ್ತು. ಅಷ್ಟು ಸಮಯದಲ್ಲಿ ಗೋಣಿ ಚೀಲಗಳನ್ನು ತರಿಸಿಕೊಳ್ಳಬಹುದಿತ್ತು. ಈಗ ನೋಂದಣಿ ಮುಗಿದು, ಖರೀದಿಸುವ ಹೊತ್ತಿನಲ್ಲಿ ಗೋಣಿ ಚೀಲಗಳಿಗೆ ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಸಿದ್ಧತೆ ಮಾಡಿಕೊಳ್ಳದಿರುವುದು ಖರೀದಿ ತಡವಾಗುವಂತೆ ಮಾಡಿದೆ. ಮತ್ತಷ್ಟು ನಿಧಾನ ಮಾಡಿದರೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ರೈತರು ಎಚ್ಚರಿಸುತ್ತಿದ್ದಾರೆ.

ADVERTISEMENT

ಗೋಣಿ ಚೀಲಗಳನ್ನು ಪಶ್ಚಿಮ ಬಂಗಾಳದಿಂದ ತರಿಸಬೇಕಿದ್ದು, ಮುಂದಿನ ವಾರದ ಹೊತ್ತಿಗೆ ರಾಜ್ಯ ತಲುಪುವ ಸಾಧ್ಯತೆಗಳಿವೆ. ಸದ್ಯ ರಾಜ್ಯದಲ್ಲಿ ಸುಮಾರು 5 ಲಕ್ಷದಷ್ಟು ಗೋಣಿಚೀಲ ದಾಸ್ತಾನು ಇದೆ. ಇವು ಒಂದು ವಾರಕ್ಕೂ ಸಾಕಾಗುವುದಿಲ್ಲ. ಚೀಲ ಬಂದರೆ ಗಣರಾಜ್ಯೋತ್ಸವದ ನಂತರ ಖರೀದಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ನೋಂದಣಿ: ಜಿಲ್ಲೆಯಲ್ಲಿ ಈ ಸಲ 56,991 ರೈತರು ನೋಂದಣಿ ಮಾಡಿಕೊಂಡಿದ್ದು, 12.95 ಲಕ್ಷ ಕ್ವಿಂಟಲ್ ರಾಗಿ ಮಾರಾಟ ಮಾಡಲಿದ್ದಾರೆ. ಜಿಲ್ಲೆಯ 10 ಕೇಂದ್ರಗಳಲ್ಲಿ ಖರೀದಿಸಲಾಗುತ್ತದೆ. ಈ ವರ್ಷ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹4,886ಕ್ಕೆ ಹೆಚ್ಚಿಸಲಾಗಿದ್ದು, 2025ರಲ್ಲಿ ₹4,290 ದರದಲ್ಲಿ ಖರೀದಿಸಲಾಗಿತ್ತು. ಹಿಂದಿನ ವರ್ಷಕ್ಕಿಂತ ಕ್ವಿಂಟಲ್‌ಗೆ ₹596 ಏರಿಕೆಯಾದಂತಾಗಿದೆ.

2025ರಲ್ಲಿ ಒಟ್ಟು 46,628 ರೈತರಿಂದ 7,36,396 ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು. ಉತ್ತಮ ಬೆಲೆ ನಿಗದಿಪಡಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ. ಮುಕ್ತ ಮಾರುಕಟ್ಟೆಗಿಂತ ಅಧಿಕ ಬೆಲೆ ಸಿಗುವುದರಿಂದ ಖರೀದಿ ಕೇಂದ್ರದತ್ತ ರೈತರು ಮುಖ ಮಾಡಿದ್ದಾರೆ.

ಹಿಂದಿನ ವರ್ಷ ಸಹ ಗೋಣಿ ಚೀಲಗಳ ಕೊರತೆಯಿಂದಾಗಿ ಮಾರ್ಚ್‌ನಲ್ಲಿ ಖರೀದಿ ಆರಂಭವಾಗಿತ್ತು. ಕೊನೆಗೆ ಮೇ ತಿಂಗಳ ವರೆಗೂ ಖರೀದಿ ಮಾಡಲಾಗಿತ್ತು. ಇದರಿಂದ ರೈತರಿಗೆ ಹಣ ನೀಡುವುದು ತಡವಾಗಿದ್ದು, ಮುಂಗಾರು ಬಿತ್ತನೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತ್ತು.

‘ಈಗಾಗಲೇ ರಾಗಿ ಖರೀದಿ ತಡವಾಗಿದ್ದು, ರೈತರನ್ನು ಮತ್ತಷ್ಟು ಕಾಯಿಸದೆ ತಕ್ಷಣ ಆರಂಭಿಸಬೇಕು. ಮತ್ತೆ ಸಮಸ್ಯೆ ಮಾಡಬಾರದು’ ಎಂದು ಕುಣಿಗಲ್ ರೈತ ಸುಬ್ಬಣ್ಣ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.