ADVERTISEMENT

ತಿಪಟೂರು | ಟೈರ್ ಸ್ಫೋಟ: ಮನೆಗೆ ನುಗ್ಗಿದ ಬಸ್

ಮೂವರು ಮಕ್ಕಳು ಸೇರಿ 30ಕ್ಕೂ ಹೆಚ್ಚು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 12:58 IST
Last Updated 30 ಜೂನ್ 2025, 12:58 IST
ಸಿದ್ದಾಪುರ ಗ್ರಾಮದ ಬಳಿ ಮನೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್
ಸಿದ್ದಾಪುರ ಗ್ರಾಮದ ಬಳಿ ಮನೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್   

ತಿಪಟೂರು: ತಾಲ್ಲೂಕಿನ ಸಿದ್ದಾಪುರ ಗೇಟ್ ಬಳಿ ಭಾನುವಾರ ಬೆಳಗ್ಗೆ ಆಗುಂಬೆಯಿಂದ ಮುಳಬಾಗಿಲಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದ ಬಲಭಾಗದ ಟೈರ್ ಸ್ಫೋಟಗೊಂಡು ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ.

ಸಿದ್ದಾಪುರ ಗ್ರಾಮದ ಪ್ರಸನ್ನ ಎಂಬುವವರ ಮನೆಗೆ ಹಾನಿಯಾಗಿದೆ. ಕಳೆದ ಫೆಬ್ರುವರಿಯಲ್ಲಿ ಗೃಹಪ್ರವೇಶ ನೆರವೇರಿಸಿದ್ದರು.

ಅರಸೀಕೆರೆ ಕಡೆಯಿಂದ ತೆರಳುತ್ತಿದ್ದ ಬಸ್‌ ಟೈರ್ ಸ್ಫೋಟಗೊಂಡು ಸುಮಾರು 150 ಮೀಟರ್ ದೂರಹೋಗಿ ರಸ್ತೆ ಬದಿಯಲ್ಲಿದ್ದ ತೇಗದ ಮರ ಹಾಗೂ ವಿದ್ಯುತ್ ಕಂಬವನ್ನು ಮುರಿದು ಮನೆಗೆ ಡಿಕ್ಕಿ ಹೊಡೆದಿದೆ.

ADVERTISEMENT

ಬಸ್‌ನಲ್ಲಿ 13 ಪುರುಷರು, 29 ಮಹಿಳೆಯರು ಸೇರಿದಂತೆ 42 ಮಂದಿ ಪ್ರಯಾಣ ಮಾಡುತ್ತಿದ್ದರು. ತಿಪಟೂರು, ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಗೆ 33 ಪ್ರಯಾಣಿಕರನ್ನು ದಾಖಲಿಸಲಾಗಿದೆ. 20ಕ್ಕೂ ಹೆಚ್ಚು ಮಂದಿಗೆ ಕೈ-ಕಾಲು ಹಾಗೂ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು, ಹಾಸನ, ತುಮಕೂರು ಆಸ್ಪತ್ರೆಗೆ ಕಳುಹಿಸಲಾಯಿತು.

ಕೆಎಸ್‌ಆರ್‌ಟಿಸಿ ಬಸ್ ಆಗುಂಬೆಯಿಂದ ಬರುವಾಗ ಶಿವಮೊಗ್ಗದಲ್ಲಿ ಟೈರ್‌ ಪಂಚರ್ ಆಗಿತ್ತು. ಮುಂಭಾಗದ ಬಲಭಾಗದ ಚಕ್ರವನ್ನು ಬದಲಾವಣೆ ಮಾಡಿ ಸಂಸ್ಕರಣೆ ಮಾಡಿದ ಚಕ್ರಪಟ್ಟಿ ಆಳವಡಿಸಿರುವುದರಿಂದ ಅಪಘಾತ ಸಂಭವಿಸಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ
ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಶಾಸಕ ಕೆ.ಷಡಕ್ಷರಿ, ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕ ಎಂ.ಎಲ್.ಪುರುಪೋತ್ತಮ್, ಡಿವೈಎಸ್‌ಪಿ ವಿನಾಯಕ ಶೆಟಿಗೇರಿ, ಹೊನ್ನವಳ್ಳಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ರಾಜೇಶ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದರು.

ಅಪಘಾತ ಸ್ಥಳದ ಮೂರು ಕಿ.ಮೀ ವ್ಯಾಪ್ತಿಯ ಕೊನೇಹಳ್ಳಿ, ಮತ್ತಿಹಳ್ಳಿ, ಬಿದರೆಗುಡಿಯಲ್ಲಿ ನಾಲ್ಕು ತಿಂಗಳಲ್ಲಿ ಎಂಟಕ್ಕೂ ಹೆಚ್ಚು ವಾಹನ-ರಸ್ತೆ ಅಪಘಾತ ಸಂಭವಿಸಿ ನಾಲ್ವರು ಪ್ರಾಣಕಳೆದುಕೊಂಡಿದ್ದಾರೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಆಳವಡಿಸದೆ ಇರುವುದು ಹಾಗೂ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರ ಮಾಡುತ್ತಿರುವುದರಿಂದ ಅಪಘಾತ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು
ಹೇಳಿದರು.

ಬಸ್‌ನ ಚಕ್ರ ಸ್ಫೋಟಗೊಂಡಿರುವುದು
ಸಿದ್ದಾಪುರ ಗ್ರಾಮದ ಬಳಿ ಮನೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್
ಸಂಸ್ಕರಣ ಮಾಡಿದ ಚಕ್ರಪಟ್ಟಿ (ಟೈರ್ )
ಸಂಸ್ಕರಣ ಮಾಡಿದ ಚಕ್ರಪಟ್ಟಿ (ಟೈರ್ )

ವಸ್ತುಗಳು ಚೆಲ್ಲಾಪಿಲ್ಲಿ

ಬಸ್‌ ಡಿಕ್ಕಿ ಹೊಡೆದ ಕ್ಷಣ ಹೊರಬಂದಾಗ ಮನೆ ಮುಂಭಾಗ ಪೂರ್ಣ ದೂಳು ಆವರಿಸಿತ್ತು. ಪುರುಷರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಗಾಜಿನ ಚೂರುಗಳು ಮನೆಯ ಒಳಗೆ ಹೊರಗೆ ಬಿದ್ದಿತ್ತು. ಅಪಘಾತ ಸಂಭವಿಸುವ ಕೆಲವೇ ಕ್ಷಣದ ಹಿಂದೆ ನಾಲ್ಕೈದು ಮಕ್ಕಳು ಅಲ್ಲೇ ಆಟವಾಡುತ್ತಿದ್ದರು ಎಂದು ಮನೆ ಮಾಲೀಕ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.