ADVERTISEMENT

ಸಕಾಲ: ತುಮಕೂರಿಗೆ ಮೊದಲ ಸ್ಥಾನ

ಸೌಲಭ್ಯಗಳನ್ನು ಪಡೆಯಲು ಅನ್‌ಲೈನ್‌ ಮೊರೆ ಹೋಗುತ್ತಿರುವ ಜಿಲ್ಲೆಯ ಜನರು

ವಿಷ್ಣುವರ್ಧನ ನಾಯ್ಕ
Published 26 ಮಾರ್ಚ್ 2019, 20:40 IST
Last Updated 26 ಮಾರ್ಚ್ 2019, 20:40 IST
sakala
sakala   

ತುಮಕೂರು: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜಿಲ್ಲೆಯ ಜನರು ಹೆಚ್ಚು ಆನ್‌ಲೈನ್‌ನ ಮೊರೆ ಹೋಗಿದ್ದು, ಸಕಾಲ ಯೋಜನೆಯಲ್ಲಿ ತುಮಕೂರು ಜಿಲ್ಲೆಯ ಕಂದಾಯ ಇಲಾಖೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಎಲ್ಲ ಇಲಾಖೆಗಳ ಲೆಕ್ಕದಲ್ಲಿ ಮೂರನೇ ಸ್ಥಾನದಲ್ಲಿದೆ.

ತುಮಕೂರು ಜಿಲ್ಲೆಯ ನಂತರ ಸ್ಥಾನದಲ್ಲಿ ಶಿವಮೊಗ್ಗ (ದ್ವೀತಿಯ), ಹಾಸನ (ತೃತಿಯ). ಎಲ್ಲ ಇಲಾಖೆಗಳ ಲೆಕ್ಕ ಹಿಡಿದರೆ ಶಿವಮೊಗ್ಗ ಮೊದಲ ಸ್ಥಾನದಲ್ಲಿದ್ದು, ಬಾಗಲಕೋಟೆ ಜಿಲ್ಲೆ (ದ್ವಿತೀಯ), ನಂತರ ಸ್ಥಾನದಲ್ಲಿ ತುಮಕೂರು ಇದೆ.

ಮಂಗಳವಾರದವರೆಗೆ ಎಲ್ಲ ಇಲಾಖೆಗಳಲ್ಲಿಯೂ ಜಿಲ್ಲೆ 2ನೇ ಸ್ಥಾನದಲ್ಲಿತ್ತು. ಆದರೆ, ಬುಧವಾರ (ಮಾರ್ಚ್‌20) ಅಂತ್ಯಕ್ಕೆ 3ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ADVERTISEMENT

ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಅಕ್ರಮಕ್ಕೆ ಆಸ್ಪದೆ ನೀಡದಂತೆ ಹಾಗೂ ಅರ್ಜಿ ವಿಲೇವಾರಿ ವಿಳಂಬ ಆಗದೆ ಕಾಲ ಕಾಲಕ್ಕೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ‘ಕರ್ನಾಟಕ ನಾಗರಿಕ ಸೇವಾ ಕಾಯ್ದೆ’ (ಸಕಾಲ) ಜಾರಿಗೊಳಿಸಲಾಯಿತು. ಅದರಂತೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಅದರಡಿ ಅರ್ಜಿ ವಿಲೇವಾರಿಗೆ ಇಲಾಖೆ ಹಾಗೂ ಸೌಲಭ್ಯಗಳಿಗೆ ತಕ್ಕಂತೆ ಆಯಾ ಅರ್ಜಿಗಳಿಗೆ ಪ್ರತ್ಯೇಕ ಅವಧಿ ನಿಗದಿ ಮಾಡಲಾಗಿತ್ತು.

ಆ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡದಿದ್ದರೆ, ಅರ್ಜಿದಾರ ದೂರು ದಾಖಲಿಸುವ ಹಾಗೂ ಅರ್ಜಿ ವಿಳಂಬಕ್ಕೆ ಕಾರಣ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆಯಡಿ ಸಕಾಲದಲ್ಲಿ ಸೇವೆ ಒದಗಿಸುವಲ್ಲಿ ಕರ್ತವ್ಯ ಲೋಪವೆಸಗಿದ ಸಾರ್ವಜನಿಕ ನೌಕರ ಸಕ್ಷಮ ಅಧಿಕಾರಿಯಿಂದ ದಿನಕ್ಕೆ ₹ 20ರಂತೆ ಗರಿಷ್ಠ ₹ 25 ಸಾವಿರದವರೆಗೆ ದಂಡ ವಸೂಲಿ ಮಾಡಬಹುದು.

ಅರ್ಜಿ ವಿಲೇವಾರಿಗೆ ಕನಿಷ್ಠ 3 ದಿನಗಳಿಂದ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಜನರ ಮನೆ ಬಾಗಲಿಗೆ ಸೌಲಭ್ಯ ತಲುಪಿಸುವುದೇ ಸಕಾಲದ ಉದ್ದೇಶವಾಗಿತ್ತು. ಈ ಕಾರ್ಯವನ್ನು ಜಿಲ್ಲೆಯ ಕಂದಾಯ ಇಲಾಖೆ ಉತ್ತಮವಾಗಿ ನಿರ್ವಹಿಸಿದೆ.

ಅನ್‌ಲೈನ್‌ ಮೂಲಕ ಸಲ್ಲಿಸಿದ ಅರ್ಜಿಯನ್ನು ನಿಗದಿತ ಅವಧಿಗೂ ಮುಂಚಿತವಾಗಿ ಅರ್ಜಿ ವಿಲೇವಾರಿ ಮಾಡುವುದು ಹಾಗೂ 1 ಲಕ್ಷ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಅರ್ಜಿ ಸ್ವೀಕೃತಿ ಮಾಡಿಕೊಂಡಿರುವುದು. ಇವೆರಡು ಅಂಶಗಳನ್ನು ಪರಿಗಣಿಸಿ ಈ ರ‍್ಯಾಂಕ್‌ನ್ನು ನೀಡಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.ಅದರಂತೆ ಸಕಾಲ (ಅನ್‌ಲೈನ್‌)ದಲ್ಲಿ ಅರ್ಜಿಗಳನ್ನು ಜಿಲ್ಲೆಯ ಜನರು ಹೆಚ್ಚು ಸಲ್ಲಿಸಿದ್ದು, ಅಧಿಕಾರಿಗಳು ಅವಧಿಗೂ ಮುಂಚಿತವಾಗಿ ಅರ್ಜಿ ವಿಲೇವಾರಿ ಮಾಡಿದ್ದಾರೆ ಎಂದು ಹೇಳಿದರು.

ಐದು ತಿಂಗಳಿನಿಂದ ಮೊದಲ ಸ್ಥಾನ

ಸಕಾಲದಲ್ಲಿ ನಿತ್ಯ ಸಲ್ಲಿಸಿದ ಅರ್ಜಿ ವಿಲೇವಾರಿ ಮಾಡಿದ ಹಾಗೂ ಸ್ವೀಕೃತಿ ಆಧಾರ ಮೇಲೆ ನಿತ್ಯವು ರ‍್ಯಾಂಕ್‌ ಅನ್ನು ನೀಡಲಾಗುತ್ತದೆ. ಆದರೂ ಕೂಡ ಕಳೆದ ನವೆಂಬರ್‌ನಿಂದ ತುಮಕೂರು ಜಿಲ್ಲೆಯ ಕಂದಾಯ ಇಲಾಖೆ ಮೊದಲ ಸ್ಥಾನದಲ್ಲಿದೆ. ಅದರಂತೆ ಎಲ್ಲ ಇಲಾಖೆಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೀಗ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ ಅಷ್ಟೇ ಎಂದು ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ತಿಳಿಸಿದರು.

***

ಅಂಕಿಅಂಶ...

ವರ್ಷ; ಸ್ವೀಕೃತಿ ಅರ್ಜಿ; ವಿಲೇವಾರಿ ಅರ್ಜಿ

2018; 1364120; 1400440

2019; 260743; 264691


ರ‍್ಯಾಂಕಿಂಗ್‌ ಪಟ್ಟಿ..

ಕಂದಾಯ ಇಲಾಖೆ; ಎಲ್ಲ ಇಲಾಖೆ

ಜಿಲ್ಲೆ; ರ‍್ಯಾಂಕ್‌; ಜಿಲ್ಲೆ; ರ‍್ಯಾಂಕ್‌

ತುಮಕೂರು; 1; ಶಿವಮೊಗ್ಗ; 1

ಶಿವಮೊಗ್ಗ; 2; ಬಾಗಲಕೋಟೆ; 2

ಹಾಸನ; 3; ತುಮಕೂರು; 3

ರಾಯಚೂರು; 4; ಚಿಕ್ಕಮಗಳೂರು; 4

ವಿಜಯಪುರ; 5; ಬೆಂಗಳೂರು ಗ್ರಾಮೀಣ; 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.