ADVERTISEMENT

ತುಮಕೂರು | ಮಳೆ ಕೊರತೆ; ಬಿತ್ತನೆಗೆ ಹಿನ್ನಡೆ

ಜೂನ್‌ನಲ್ಲಿ ಶೇ 39ರಷ್ಟು ಮಳೆ ಕೊರತೆ; ನಡೆಯದ ಶೇಂಗಾ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 5:43 IST
Last Updated 1 ಜುಲೈ 2025, 5:43 IST
ಬರಿದಾಗಿರುವ ಕೆರೆ (ಸಾಂದರ್ಭಿಕ ಚಿತ್ರ)
ಬರಿದಾಗಿರುವ ಕೆರೆ (ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆ ವರುಣನ ಅವಕೃಪೆಗೆ ತುತ್ತಾಗಿದ್ದು, ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿದ್ದ ಬೆಳೆ ಒಣಗುತ್ತಿದ್ದರೆ, ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. ಗಾಳಿಯ ಜತೆಗೆ ಶುಷ್ಕ ವಾತಾವರಣ ಮುಂದುವರಿದಿದೆ.

ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಆಶಾದಾಯಕ ಭರವಸೆ ಮೂಡಿಸಿತ್ತು. ಜೂನ್‌ ತಿಂಗಳಲ್ಲೂ ಅದೇ ವಾತಾವರಣ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಹವಾಮಾನ ತಜ್ಞರೂ ಉತ್ತಮ ಮಳೆಯ ಮುನ್ಸೂಚನೆ ನೀಡಿದ್ದರು. ಆದರೆ ವರುಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ಮುಂಗಾರು ಪೂರ್ವದಲ್ಲಿ ಹೆಸರು, ಜೋಳ, ತೊಗರಿ ಬಿತ್ತನೆ ಮಾಡಲಾಗಿತ್ತು. ಕೆಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಹೆಸರು ಸೇರಿದಂತೆ ಮುಂಗಾರು ಪೂರ್ವ ಬಿತ್ತನೆಯೂ ಕುಂಠಿತಗೊಂಡಿತ್ತು. ಹೆಸರು ಬಿತ್ತನೆ ಮಾಡಿದ್ದರೂ ಮಳೆ ಕೊರತೆಯಿಂದ ಬಾಡಿದ್ದು, ಇಳುವರಿ ಮೇಲೆ ಪರಿಣಾಮ ಬೀರಿದೆ. ಜೋಳ, ತೊಗರಿಯನ್ನು ಅತ್ಯಲ್ಪ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ADVERTISEMENT

ಜೂನ್‌ನಲ್ಲಿ ಮಳೆಯಾಗಿದ್ದರೆ ಭೂಮಿ ಉಳುಮೆ ಮಾಡಿಕೊಂಡು, ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ವರುಣನ ಸುಳಿವು ಕಾಣದಾಗಿದ್ದು, ಸಾಕಷ್ಟು ಕಡೆಗಳಲ್ಲಿ ಇನ್ನೂ ಭೂಮಿಗೆ ನೇಗಿಲು ತಾಗಿಸಿಲ್ಲ. ಕೊರಟಗೆರೆ, ಮಧುಗಿರಿ, ಶಿರಾ, ತುರುವೇಕೆರೆ, ಕುಣಿಗಲ್, ತುಮಕೂರು ಭಾಗದಲ್ಲಿ ಉಳುಮೆ ಮಾಡದೆ ಬೀಳು ಬಿಡಲಾಗಿದೆ.

ಸಿದ್ಧತೆ ಪೂರ್ಣಗೊಂಡಿದ್ದರೆ ಜುಲೈನಲ್ಲಿ ತಡವಾಗಿ ಮಳೆಯಾಗಿದ್ದರೂ ಬಿತ್ತನೆಗೆ ಸಹಕಾರಿಯಾಗುತಿತ್ತು. ಮುಂದಿನ ದಿನಗಳಲ್ಲಿ ಮಳೆ ಬಿದ್ದರೆ ಉಳಿಮೆ ಮಾಡಿ, ಭೂಮಿ ಸಿದ್ಧಪಡಿಸಿಕೊಂಡು ಬಿತ್ತನೆ ಮಾಡುವ ಹೊತ್ತಿಗೆ ಸಮಯ ಮೀರಿರುತ್ತದೆ ಎಂಬ ಆತಂಕವನ್ನು ಹೊನ್ನುಡಿಕೆ ರೈತ ನಾಗರಾಜು ವ್ಯಕ್ತಪಡಿಸುತ್ತಾರೆ.

ಶೇಂಗಾ ಕುಸಿತ: ಈ ವೇಳೆಗಾಗಲೇ ಶೇಂಗಾ ಬಿತ್ತನೆ ಮುಗಿಯುತ್ತಾ ಬರಬೇಕಿತ್ತು. ಜುಲೈ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಬಿತ್ತನೆ ನಡೆಯುವುದು ವಾಡಿಕೆ. ಆದರೆ ಈ ಸಲ ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ 14,344 ಹೆಕ್ಟೇರ್ (76,570 ಹೆಕ್ಟೇರ್ ಗುರಿ) ಪ್ರದೇಶದಲ್ಲಷ್ಟೇ ಬಿತ್ತನೆ ಮಾಡಲಾಗಿದೆ. ಜುಲೈ ಮಧ್ಯಭಾಗದ ನಂತರ ಬಿತ್ತನೆ ಮಾಡಿದರೆ ಹಿಂಗಾರು ಮಳೆಗೆ ಸಿಲುಕಿ ಬೆಳೆ ಹಾಳಾಗುತ್ತದೆ. ಮಳೆಯಿಂದ ಒಕ್ಕಣೆ ಮಾಡಲು ಸಾಧ್ಯವಾಗುವುದಿಲ್ಲ. ಮಳೆ ತಡವಾದರೆ ಬಿತ್ತನೆಯನ್ನೇ ಕೈಬಿಡಬೇಕಾಗುತ್ತದೆ ಎಂದು ಪಾವಗಡ ಭಾಗದ ರೈತರು ಹೇಳುತ್ತಿದ್ದಾರೆ.

ಹಿಂದಿನ ವರ್ಷ 1.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದರೆ, ಈ ವರ್ಷವೂ ಅಷ್ಟೇ ಪ್ರದೇಶದಲ್ಲಿ ಬಿತ್ತನೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದ ವರೆಗೂ ಬಿತ್ತನೆಗೆ ಅವಕಾಶವಿದೆ. ತಕ್ಷಣಕ್ಕೆ ಮಳೆ ಬಿದ್ದು, ಭೂಮಿ ಉಳುಮೆ ಮಾಡಿದರೆ ಬಿತ್ತನೆಗೆ ನೆರವಾಗಲಿದೆ. ತಡವಾದರೆ ರಾಗಿ ಬಿತ್ತನೆ ಮೇಲೂ ಪರಿಣಾಮ ಬೀರಲಿದೆ.

ಮಳೆ ಕೊರತೆ: ಜಿಲ್ಲೆಯಲ್ಲಿ ಮೇನಲ್ಲಿ ಸರಾಸರಿ 78 ಮಿ.ಮೀ ಮಳೆಯಾಗಬೇಕಿದ್ದು, 136 ಮಿ.ಮೀ (ಶೇ 74ರಷ್ಟು ಅಧಿಕ) ಸುರಿದಿತ್ತು. ಜೂನ್‌ನಲ್ಲಿ ತೀವ್ರ ಕೊರತೆ ಎದುರಾಗಿದ್ದು, ಸರಾಸರಿ 58 ಮಿ.ಮೀ ಬೀಳಬೇಕಿದ್ದು, ಕೇವಲ 35 ಮಿ.ಮೀ (ಶೇ 39ರಷ್ಟು ಕೊರತೆ) ಮಳೆಯಾಗಿದೆ. ಭೂಮಿ ಬಾಯ್ದೆರೆದು ನಿಂತಿದೆ. ಕೊರಟಗೆರೆ, ಮಧುಗಿರಿ ಭಾಗದಲ್ಲಂತೂ ತೀವ್ರ ಕೊರತೆ ಎದುರಾಗಿದೆ.

ಜೂನ್ ತಿಂಗಳ ಮಳೆ ವಿವರ (ಮಿ.ಮೀ)

ತಾಲ್ಲೂಕು;ವಾಡಿಕೆ;ಬಿದ್ದ ಮಳೆ;ಕೊರತೆ(ಶೇ)

ಚಿ.ನಾ.ಹಳ್ಳಿ;69;22;67

ಗುಬ್ಬಿ;78;46;41

ಕೊರಟಗೆರೆ;71;28;60

ಕುಣಿಗಲ್;69;37;46

ಮಧುಗಿರಿ;73;19;73

ಪಾವಗಡ;53;62;17

ಶಿರಾ;60;37;38

ತಿಪಟೂರು;61;24;60

ತುಮಕೂರು;81;38;53

ತುರುವೇಕೆರೆ;64;20;68

ಒಟ್ಟು;58;35;39

ಬಿತ್ತನೆ ಪ್ರದೇಶ (ಹೆಕ್ಟೇರ್‌ಗಳಲ್ಲಿ)

ಬೆಳೆ;ಗುರಿ;ಬಿತ್ತನೆ

ಶೇಂಗಾ;76,570;14,344

ಜೋಳ;30,578;1,172

ತೊಗರಿ;15,778;2,261

ರಾಗಿ;1,51,375;120

ಸಿರಿಧಾನ್ಯ;4,460;004

ಹೆಸರು;10,300;6,670

ಮುಂದೆ ಮಳೆಯಾಗಲಿದೆ ಜುಲೈನಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು ಶೇಂಗಾ ರಾಗಿ ಬಿತ್ತನೆಗೆ ಸಹಕಾರಿಯಾಗಲಿದೆ. ಹಿಂದಿನ ವರ್ಷದಂತೆ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ತಿಳಿಸಿದರು. ರಾಗಿಗೆ ಬೆಂಬಲ ಬೆಲೆ ಹೆಚ್ಚಳದಿಂದಾಗಿ ಸಾಕಷ್ಟು ರೈತರು ಮುಂಗಾರು ಪೂರ್ವದಲ್ಲಿ ಹೆಸರು ಬೆಳೆಯಲು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಹಿಂದಿನ ವರ್ಷದಿಂದ ರಾಗಿ ಬೆಳೆಯುವ ಪ್ರದೇಶ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.