ತುರುವೇಕೆರೆ: ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಇದುವರೆಗೆ ಮಳೆ ಬಾರದೆ ಆಂತಕದಲ್ಲಿದ್ದ ರೈತರಿಗೆ ಉತ್ತಮ ಮಳೆಯಿಂದ ಮುಂಗಾರು ಬಿತ್ತನೆ ಮಾಡಲು ನಿಟ್ಟುಸಿರು ಬಿಡುವಂತಾಗಿದೆ. ತೋಟ, ಹೊಲ, ಗದ್ದೆ ಮತ್ತು ತಗ್ಗಿನ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದರೂ ಮುಂಗಾರು ಭಿತ್ತನೆಗೆ ಹಿನ್ನೆಡೆಯಾಗಿದೆ.
ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಹದ ಮಳೆಯಿಂದ ಭೂಮಿ ತಂಪೆರೆದಿದೆ. ತೋಟದ ಸಾಲುಗಳಲ್ಲಿ ಜಾನುವಾರುಗಳಿಗೆ ಹಾಕಿದ್ದ ಮೇವಿಗೆ ಈ ಮಳೆ ಹೆಚ್ಚಿನ ಚೈತನ್ಯ ನೀಡಿದೆ.
ಮಳೆ ಮತ್ತು ಹೇಮಾವತಿ ನಾಲಾ ನೀರಿನಿಂದ ತುರುವೇಕೆರೆ ಕೆರೆ ಕೋಡಿ ಬಿದ್ದು ಶಿಂಷಾ ನದಿಗೆ ರಭಸವಾಗಿ ಹರಿಯುತ್ತಿದೆ. ಮುನಿಯೂರು ಗದ್ದೆ ಬಯಲಿನಲ್ಲಿ ಮಳೆ ನೀರು ನಿಂತಿದೆ.
ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿಯ ಸಿದ್ದನಹಟ್ಟಿ ಗ್ರಾಮದ ಶಿವಮ್ಮ ಅವರ ಮನೆಯ ಒಂದು ಭಾಗದ ಗೋಡೆ ಕುಸಿದು ನೆಲಕ್ಕೆ ಬಿದ್ದಿದ್ದು ಮನೆಯ ವಸ್ತುಗಳು ನೆನೆದಿವೆ. ಅಮ್ಮಸಂದ್ರ ರೈಲ್ವೆ ಸ್ಟೇಷನ್ ರಸ್ತೆ ಸೇತುವೆ ಬಸವೇಶ್ವರ ದೇವಾಲಯದ ಪಕ್ಕದ ರಸ್ತೆ ಚರಂಡಿ ಕಟ್ಟಿಕೊಂಡು ರಸ್ತೆ ಪಕ್ಕದ ಮನೆ ಮುಂಭಾಗಕ್ಕೆ ನೀರು ಆವರಸಿಕೊಂಡಿದೆ. ಪಟ್ಟಣದ 9ನೇ ವಾರ್ಡ್ನ ಮನೆಯೊಂದಕ್ಕೆ ನೀರು ನುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.