ಗುಬ್ಬಿ: ‘ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರಿಗೆ ತಾಕತ್ತಿದ್ದರೆ ನೇರ ರಾಜಕೀಯ ಮಾಡಲಿ. ಚಾಕು, ಚೂರಿ ಸಂಸ್ಕೃತಿ ನಿಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತಿಸಲಿ’ ಎಂದು ಶಾಸಕ ಮಸಾಲ ಜಯರಾಮ್ ಹೇಳಿದರು.
ಅಂಕಳಕೊಪ್ಪದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ಮಗ ತೇಜು ಮೇಲೆ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಬೆಂಬಲಿಗರು ಎನ್ನಲಾದ ಕೆಲವು ರೌಡಿಶೀಟರ್ಗಳು ಹಲ್ಲೆ ನಡೆಸಿದ್ದಾರೆ. ಇದು ಕೃಷ್ಣಪ್ಪ ಅವರ ಕುಮ್ಮಕ್ಕಿನಿಂದಲೇ ನಡೆದಿದೆ. ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಸಂಸ್ಕೃತಿ ಆರಂಭಿಸಿರುವುದು ಖಂಡನೀಯ ಎಂದರು.
‘ಕಾನೂನಿಗಿಂತ ನಾವು ದೊಡ್ಡವ ರಲ್ಲ. ಕಾನೂನಿನ ಬಗ್ಗೆ ನಂಬಿಕೆ ಇದೆ’ ಎಂದರು.
ಸಿ.ಎಸ್.ಪುರದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ನಾಗರಾಜು ಮಾತನಾಡಿ, ‘ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಕ್ಷೇತ್ರದಲ್ಲಿ ರೌಡಿಸಂ ಪ್ರೋತ್ಸಾಹಿಸುತ್ತಿದ್ದಾರೆ. ಅಮಾ ಯಕ ತೇಜುವಿನ ಮೇಲೆ ದಾಳಿಗೆ ಯತ್ನಿಸಿ ಶಾಸಕರನ್ನು ಪ್ರಕರಣದಲ್ಲಿ ಸಿಕ್ಕಿಸಲು ಯತ್ನಿ ಸುತ್ತಿರುವುದು ಖಂಡನೀಯ’ ಎಂದರು.
ಠಾಣೆಗೆ ಮುತ್ತಿಗೆ: ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿಗರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿ ದರು. ಪೊಲೀಸರು ದಾರಿ ನಡುವೆ ತಡೆದರು. ‘ಆರೋಪಿಗಳು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಜರಗಿಸಲಾಗುವುದು ಯಾರೂ ಕೊರೊನಾನಿಯಮ ಉಲ್ಲಂಘಿಸ ಬಾರದು’ ಎಂದು ಗುಂಪನ್ನು ಚದುರಿಸಿದರು.
ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ, ‘ಕೋವಿಡ್ ನಿಯಮ ಪಾಲಿಸಬೇಕಾಗಿರುವುದರಿಂದ ಜನರು ಗುಂಪು ಸೇರಿದೆ ಪೊಲೀಸರಿಗೆ ಕಾನೂನು ರೀತಿ ಕೆಲಸ ಮಾಡಲು ಅವಕಾಶ ನೀಡಬೇಕು. ಪ್ರಕರಣ ಕುರಿತು ತನಿಖೆ ನಡೆಸಲು ಡಿವೈಎಸ್ಪಿ ಅವರನ್ನು ತನಿಕಾಧಿಕಾರಿಯಾಗಿ ನೇಮಿಸಿದ್ದೇವೆ. ದೂರುಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಭಾನುಪ್ರಕಾಶ್, ಪಾಪು, ಕೆಂಪರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.