ADVERTISEMENT

ವಚನಕಾರರು ನೊಂದವರ ಧ್ವನಿ: ರೂಪಾ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 12:37 IST
Last Updated 2 ಮಾರ್ಚ್ 2020, 12:37 IST
ವಚನ ವಾಚಿಸಿದ ವಿದ್ಯಾರ್ಥಿಗಳಿಗೆ ‘ವಚನ–ದೀವಿಗೆ ಪ್ರಶಂಸನಾ ಪತ್ರ’ ಪ್ರದಾನ ಮಾಡಲಾಯಿತು.
ವಚನ ವಾಚಿಸಿದ ವಿದ್ಯಾರ್ಥಿಗಳಿಗೆ ‘ವಚನ–ದೀವಿಗೆ ಪ್ರಶಂಸನಾ ಪತ್ರ’ ಪ್ರದಾನ ಮಾಡಲಾಯಿತು.   

ತುಮಕೂರು: ಸ್ಥಾವರವಾಗಿದ್ದ ಸಮಾಜವನ್ನು ಜಂಗಮ ಲೋಕವಾಗಿ ಮಾಡಿದವರು ಹನ್ನೆರಡನೇ ಶತಮಾನದ ವಚನಕಾರರು ಎಂದು ಶರಣು ವಿಶ್ವವಚನ ಪ್ರತಿಷ್ಠಾನದ ಸಂಸ್ಥಾಪಕ ನಿರ್ದೇಶಕಿ ರೂಪಾ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಪ್ರತಿಷ್ಠಾನವು ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ವಚನಕಾರರು ನೊಂದವರಿಗೆ ಧ್ವನಿ ನೀಡಿದರು. ಆತ್ಮ ಕಲ್ಯಾಣದ ಜತೆಗೆ ಲೋಕ ಕಲ್ಯಾಣ ಸಾಧಿಸಿದರು. ಕಾಯಕದಲ್ಲಿಯೇ ಶಿವನನ್ನು ಕಾಣುವ ಮಹತ್ವವಾದ ಅಂಶ ತಿಳಿಸಿಕೊಟ್ಟರು. ದೇವರ ಸಾಕ್ಷಾತ್ಕಾರ ಪಡೆಯುವುದು ದುರ್ಲಭ ಎಂದುಕೊಂಡಿದ್ದ ಕಾಲದಲ್ಲಿ ಸರಳ ವಚನಗಳ ಮೂಲಕ ಸಾಮಾನ್ಯರೂ ಕೂಡಾ ದೇವರ ಕೃಪೆಗೆ ಪಾತ್ರರಾಗಬಹುದು ಎಂಬುದನ್ನು ವಚನ ಕ್ರಾಂತಿಯ ಮೂಲಕ ತೋರಿಸಿಕೊಟ್ಟರು ಎಂದರು.

ADVERTISEMENT

ಪ್ರತಿಷ್ಠಾನದ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಶಿವನು ನಾದಪ್ರಿಯನಲ್ಲ, ವೇದಪ್ರಿಯನಲ್ಲ ಭಕ್ತಿಪ್ರಿಯ ಎಂದು ತೋರಿಸಿಕೊಟ್ಟ ಬಸವಣ್ಣನವರ ತತ್ವಕ್ಕೆ ವಿಶ್ವವೇ ತಲೆದೂಗುತ್ತಿದೆ. ಇದಕ್ಕೆ ಲಂಡನ್‍ನಲ್ಲಿ ಸ್ಥಾಪಿಸಿರುವ ಬಸವ ಪುತ್ಥಳಿಯೇ ಉದಾಹರಣೆ. ಸ್ತ್ರೀಸಮಾನತೆಯ ಅಡಿಗಲ್ಲನ್ನು ಸುಂದರ ಕಟ್ಟಡವನ್ನಾಗಿ ನಿರ್ಮಾಣ ಮಾಡಿದ ಅಗ್ಗಳಿಕೆ ಶರಣರದ್ದು ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿ ಶೈಲಜಾ, ಮುಖ್ಯಶಿಕ್ಷಕಿ ಸುಶೀಲಮ್ಮ, ಶಿಕ್ಷಕರಾದ ಶಾರದಮ್ಮ, ಹೊನ್ನಮ್ಮ, ವರಲಕ್ಷ್ಮಿ, ಗಿರಿಜೇಶ್, ವಚನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.