ADVERTISEMENT

ವಿವೇಕಾನಂದರ ಹೆಸರು ಬಳಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 3:26 IST
Last Updated 16 ಜನವರಿ 2021, 3:26 IST

ತುಮಕೂರು: ಸ್ವಾಮಿ ವಿವೇಕಾನಂದರನ್ನು ಕೆಲವು ಶಕ್ತಿಗಳು ಹಿಂದೂ ಧರ್ಮದ ಐಕಾನ್‌ಆಗಿ ಬಿಂಬಿಸುತ್ತಿವೆ ಎಂದು ಪ್ರಗತಿಪರ ಚಿಂತಕ ಸಿ.ಯತಿರಾಜು ಟೀಕಿಸಿದರು.

ಎಸ್‌ಎಫ್‌ಐ, ಡಿವೈಎಫ್‌ಐ ಸಂಘಟನೆ ಜಂಟಿಯಾಗಿ ನಗರದ ಜನಚಳವಳಿ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುತ್ವಕ್ಕಿಂತ ಭಿನ್ನವಾದ ನೆಲೆಯಲ್ಲಿ ನೋಡಬೇಕು. ಧರ್ಮವೆಂಬುದು ದೇವಸ್ಥಾನ ಕಟ್ಟುವುದರಲ್ಲಿ ಇಲ್ಲ, ಧರ್ಮ ಗ್ರಂಥಗಳಲ್ಲಿಯೂ ಇಲ್ಲ. ಧರ್ಮವಿರುವುದು ಸಾಕ್ಷಾತ್ಕಾರ ದಲ್ಲಿ ಎಂಬುದು ವಿವೇಕಾನಂದರ ಘೋಷಣೆಯಾಗಿತ್ತು. ಮೂಢನಂಬಿಕೆ ಗಳು ಉರುಳಿಲ್ಲದ ಕಲ್ಪನೆಗಳು ಎಂದು ನಂಬಿದ್ದರು. ಹಾಗಾಗಿ ಅವರ ನೈಜ ಸಿದ್ಧಾಂತವನ್ನು ವಿದ್ಯಾರ್ಥಿ, ಯುವ ಜನರಿಗೆ ತಿಳಿಸಿಕೊಡಬೇಕು. ಇಂದಿನ ಯುವ ಜನತೆ ವಿವೇಕಾನಂದರನ್ನು ಆರಾಧಿಸದೆ, ಸ್ಫೂರ್ತಿದಾಯಕವಾಗಿ ಅವರ ವೈಚಾರಿಕ ವಿಚಾರಗಳನ್ನು ಅಧ್ಯಯನ ಮಾಡಬೇಕು ಎಂದರು.

ADVERTISEMENT

ಪ್ರಸ್ತುತ ಸರ್ಕಾರಗಳು ವಿವೇಕಾನಂದರ ನೈಜ ಆದರ್ಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಶಿಕ್ಷಣ, ರೈತ, ಕಾರ್ಮಿಕ ಕಾನೂನು ತಿದ್ದುಪಡಿ ಮಾಡಲಾಗಿದೆ. ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು, ವಿದ್ಯಾರ್ಥಿಗಳು, ಯುವಜನರು ಪ್ರತಿಭಟನೆ ವ್ಯಕ್ತಪಡಿಸಬೇಕು ಎಂದರು.

ಡಿವೈಎಫ್‌ಐ ಮುಖಂಡ ಜಿ.ದರ್ಶನ, ‘ವಿವೇಕಾನಂದರನ್ನು ಮೂರ್ತಿ ಪೂಜೆಗೆ ಸೀಮಿತಗೊಳಿಸಬಾರದು. ಹಸಿದವರಿಗೆ ಅನ್ನ, ನೊಂದವರಿಗೆ ಸಹಾಯ ಮಾಡಬೇಕು’ ಎಂದು ಹೇಳಿದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಇ.ಶಿವಣ್ಣ, ನಾಗರಾಜು, ಕಾಂತರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.