ಕುಣಿಗಲ್: ‘ಕೃಷಿ ಸಂಸ್ಕೃತಿಯನ್ನೆ ನಂಬಿದ ಒಕ್ಕಲಿಗ ಸಮುದಾಯ ರಾಜಧರ್ಮ ಪರಿಪಾಲಿಸಿದೆ’ ಎಂದು ಆದಿ ಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಒಕ್ಕಲಿಗರ ಧರ್ಮ ಮಹಾಸಭಾ ಆಶ್ರಯದಲ್ಲಿ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಸ್ಮರಣೆ ಮತ್ತು ಒಕ್ಕಲಿಗರ
ಧರ್ಮ ಸಮಾವೇಶದಲ್ಲಿ ಮಾತನಾಡಿದರು.
ಆಧುನಿಕತೆ ಅನುಕರಣೆಯಿಂದಾಗಿ ಮನಸ್ಸುಗಳು ಕೊಳೆಯುತ್ತಿದ್ದು, ಮನೆಗಳು ಮತ್ತು ಸಮಾಜವೂ ಕೊಳೆ ಯುತ್ತಿದೆ. ಇವುಗಳನ್ನು ಸರಿಪಡಿಸಲು ಧರ್ಮಗುರುಗಳ ಸ್ಮರಣೆ ಮತ್ತು ಮಾರ್ಗ ದರ್ಶನ ಅಗತ್ಯವಾಗಿದೆ ಎಂದರು.
ಸಂವಿಧಾನದ ವ್ಯವಸ್ಥೆಯಡಿ ಬದುಕುತ್ತಿರುವ ನಮಗೆ ಸಂವಿಧಾನವೇ ಮಹಾ ಧರ್ಮ. ಆದರೂ ಒಕ್ಕಲಿಗ ಸಮುದಾಯಕ್ಕೆ ತೊಂದರೆಯಾಗುತ್ತಿದ್ದು, ಸೂಕ್ಮವಾಗಿ ಅವಲೋಕಿಸುತ್ತಿದ್ದೇವೆ. ಆಳುವವರು ತೊಂದರೆಯಾಗದಂತೆ ನೋಡಿಕೊಂಡು ಹಿತ ಕಾಪಾಡಬೇಕಿದೆ. ಇಲ್ಲದಿದ್ದರೇ ಸಂಘಟಿತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗ ಸಮುದಾಯವನ್ನು ರಾಜಕೀಯವಾಗಿ ಉಪಯೋಗಿಸಿಕೊಂಡರೂ, ಯಾವ ಒಕ್ಕಲಿಗ ರಾಜಕಾರಣಿಯನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿ ಹುದ್ದೆಯನ್ನು ಪರಿಪೂರ್ಣಾವಧಿ ಅಧಿಕಾರ ನಡೆಸಲು ಅವಕಾಶ ನೀಡಿಲ್ಲ. ಕುರುಬರು, ವೀರಶೈವ ಸ್ವಾಮೀಜಿಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಜಾತಿಗೊಂದು ನಿಗಮ ಮಂಡಳಿ ರಚಿಸುತ್ತಿದೆ. ಒಕ್ಕಲಿಗ ಸಮಾಜದವರಿಗಾಗಿರುವ ಅನ್ಯಾಯ ಸರಿಪಡಿಸಲು ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಎಲ್ಲರೂ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿದರು.
ಶಾಸಕ ಡಾ. ರಂಗನಾಥ್ ಮಾತನಾಡಿ, ಒಕ್ಕಲಿಗ ಸಮುದಾಯದ ಚುಂಚನಗಿರಿಮಠ ನಾಡಿನ ಶೈಕ್ಷಣಿಕ, ಧಾರ್ಮಿಕ ಮತ್ತು ಪರಿಸರ ಸಂರಕ್ಷಣೆಗೆ ಶ್ರಮಿಸಿದೆ. ಜನಸಂಖ್ಯಾಧಾರಿತ ಮೀಸಲಾತಿಗೆ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದರು.
ಚಿಕ್ಕಬಳ್ಳಾಪುರ ಮಠದ ಮಂಗಳಾನಂದನಾಥ ಸ್ವಾಮೀಜಿ, ಅರೆ ಶಂಕರ ಮಠದ ಸಿದ್ದರಾಮಚೈತನ್ಯ ಸ್ವಾಮೀಜಿ, ಮಾಜಿ ಶಾಸಕ
ಬಿ.ಬಿ.ರಾಮಸ್ವಾಮಿಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್, ಪುರಸಭೆ ಅಧ್ಯಕ್ಷ ನಾಗೇಂದ್ರ
ಇದ್ದರು.
ಕಾರ್ಯಕ್ರಮದಲ್ಲಿ 50 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ 65 ದಂಪತಿಗಳನ್ನು ಸನ್ಮಾನಿಸಲಾಯಿತು. ಧರ್ಮಸಭಾದ ಅಧ್ಯಕ್ಷ ಕೃಷ್ಣೆಗೌಡ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.