ತುಮಕೂರು: ಶೇಕ್ಸ್ ಪಿಯರ್ ಸಾಹಿತ್ಯವೆಲ್ಲ ಜೀವನ ಅನುಭವದಿಂದ ರೂಪುಗೊಂಡಿವೆ. ಅವು ಕಾಲಾತೀತವಾದವು, ಪ್ರಾದೇಶಿಕ ಅಸ್ಮಿತೆ ಉಳಿಸಿಕೊಂಡಿವೆ ಎಂದು ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಹಮ್ಮಿಕೊಂಡಿದ್ದ ‘ಶೇಕ್ಸ್ ಪಿಯರ್ ಸಾಹಿತ್ಯಕ್ಕೊಂದು ಪ್ರವೇಶ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೇಕ್ಸ್ ಪಿಯರ್ನ 38 ನಾಟಕಗಳು ಕೇವಲ ಕಲ್ಪನೆಯ ಸೃಷ್ಟಿಯಲ್ಲ. ಇತಿಹಾಸ, ಓದು, ಅನುಭವದಿಂದ ರೂಪಿತವಾದವು. ತನ್ನ ನಾಟಕದ ಪಾತ್ರಗಳನ್ನು ಮನುಷ್ಯ ಸಹಜ ಗುಣಗಳಿಂದ ರೂಪಿಸಿದ. ಪ್ರೀತಿ, ದ್ವೇಷ, ಅಸೂಯೆ, ಹೊಟ್ಟೆ ಕಿಚ್ಚು, ಸೇಡಿನಿಂದ ತುಂಬಿದ ಪಾತ್ರಗಳು ಜೀವಂತವಾಗಿ ಕಾಣುತ್ತವೆ ಎಂದರು.
ಜೂಲಿಯಸ್ ಸೀಸರ್ನಂತೆ ಅವಕಾಶ ಸಿಕ್ಕರೆ ಸರ್ವಾಧಿಕಾರಿಯಾಗುವ ಲಕ್ಷಣವುಳ್ಳ, ಮ್ಯಾಕ್ಬೆತ್ನಂತೆ ಅಧಿಕಾರದ ಮಹತ್ವಾಕಾಂಕ್ಷೆ ಉಳ್ಳ, ಹ್ಯಾಮ್ಲೆಟ್ನಂತೆ ನಿರ್ಧಾರ ತೆಗೆದುಕೊಳ್ಳಲು ಸದಾ ಹಿಂಜರಿಯುವ, ಕಿಂಗ್ ಲಿಯರ್ನಂತೆ ಮಕ್ಕಳಿಗೆ ತನ್ನೆಲ್ಲ ಆಸ್ತಿ ಕೊಟ್ಟು ಬೀದಿ ಪಾಲಾಗುವ ಮನುಷ್ಯರು ಎಲ್ಲ ಕಾಲದಲ್ಲಿಯೂ ಇದ್ದರು. ಮುಂದೆಯೂ ಇರಲಿದ್ದಾರೆ ಎಂದು ವಿಶ್ಲೇಷಿಸಿದರು.
ಒಂದು ಭಾಷೆ ಮತ್ತು ಅದರ ಸಾಹಿತ್ಯ ವಿಸ್ತರಿಸಬೇಕಾದರೆ ಅಧಿಕಾರದ ಬೆಂಬಲ ಮುಖ್ಯ. ಕನ್ನಡಿಗರು ಬೆಳೆದರೆ ಕನ್ನಡ ಭಾಷೆಯೂ ಬೆಳೆಯುತ್ತದೆ ಎಂದರು.
ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ.ಶೇಟ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಜ್ಯೋತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.