ADVERTISEMENT

ಅಪಘಾತದಲ್ಲಿ ಯುವತಿ ಸಾವು: ಆಸ್ಪತ್ರೆ ಪೀಠೋಪಕರಣ ಧ್ವಂಸ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 5:05 IST
Last Updated 4 ಆಗಸ್ಟ್ 2020, 5:05 IST
ಆಸ್ಪತ್ರೆಯ ಪೀಠೋಪಕರಣ ದ್ವಂಸ ಮಾಡಿರುವುದು
ಆಸ್ಪತ್ರೆಯ ಪೀಠೋಪಕರಣ ದ್ವಂಸ ಮಾಡಿರುವುದು   

ಹುಳಿಯಾರು: ಸಮೀಪದ ಮತಿಘಟ್ಟ ಗ್ರಾಮದ ಗಾಂಧಿನಗರದ ಬಳಿ ಸೋಮವಾರ ರಸ್ತೆ ಅಪಘಾತದಲ್ಲಿ ಬಿಳಗಿಹಳ್ಳಿಯ ಯುವತಿ ಸೌಮ್ಯಾ (23) ಮೃತಪಟ್ಟಿದ್ದಾರೆ.

ದ್ವಿಚಕ್ರ ವಾಹನದಲ್ಲಿ ತಿಪಟೂರಿನಿಂದ ಸ್ವಗ್ರಾಮಕ್ಕೆ ಹಿಂದಿರುವಾಗ ತಿಪಟೂರು- ಹುಳಿಯಾರು ಮುಖ್ಯರಸ್ತೆಯ ಗಾಂಧಿನಗರದ ಬಳಿ ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾರೆ. ದಾರಿಹೋಕರು ಕೂಡಲೇ ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಆಸ್ಪತ್ರೆ ಸಿಬ್ಬಂದಿ ಮೃತಪಟ್ಟಿರುವುದನ್ನು ದೃಢಪಡಿಸಿದರು.

ಇದೇ 5ರಂದು ಯುವತಿಯ ಮದುವೆ ನಿಶ್ಚಯವಾಗಿತ್ತು. ಸ್ಥಳಕ್ಕೆ ಹಂದನಕೆರೆ ಪಿಎಸ್‌ಐ ಯೋಗೀಶ್‌ ಭೇಟಿ ನೀಡಿದ್ದರು.

ADVERTISEMENT

ಆಸ್ಪತ್ರೆ ಪೀಠೋಪಕರಣ ದ್ವಂಸ: ‘ಯುವತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಸಾವು ಸಂಭವಿಸುತ್ತಿರಲಿಲ್ಲ. ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವುದರಿಂದ ಸಾವು ಸಂಭವಿಸಿದೆ. ಇದಕ್ಕೆಲ್ಲ ಆರೋಗ್ಯ ಇಲಾಖೆಯವರೇ ಹೊಣೆ’ ಎಂದು ಯುವತಿಯ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ಪೀಠೋಪಕರಣಗಳನ್ನು ದ್ವಂಸ ಮಾಡಿದರು.

ಸ್ಥಳಕ್ಕೆ ಬಂದ ಪ್ರಭಾರ ವೈದ್ಯೆ ಹಿಮಶ್ವೇತಾ ಆಸ್ಪತ್ರೆಯ ಸಿಸಿಟಿವಿಫುಟೇಜ್‌ಗಳನ್ನು ಆಧರಿಸಿ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.