ADVERTISEMENT

ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 9:52 IST
Last Updated 20 ಡಿಸೆಂಬರ್ 2019, 9:52 IST
ಶ್ರೀನಿವಾಸ
ಶ್ರೀನಿವಾಸ   

ಕೊರಟಗೆರೆ: ಯುವಕನೊಬ್ಬನನ್ನು ಲಾಂಗು, ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೊರಟಗೆರೆ ತಾಲ್ಲೂಕಿನ ದಾಬಸ್ ಪೇಟೆ–ಕೊರಟಗೆರೆ ಮುಖ್ಯರಸ್ತೆಯ ಜಿ.ನಾಗೇನಹಳ್ಳಿ ಬಳಿ ಗುರುವಾರ ನಡೆದಿದೆ.

ಮಧುಗಿರಿ ತಾಲ್ಲೂಕಿನ‌ ಮಿಡಿಗೇಶಿ ಹೋಬಳಿಯ ಬಿದರಗೆರೆ ವಾಸಿ ಶ್ರೀನಿವಾಸ(25)ಕೊಲೆಗೀಡಾದ ಯುವಕ. ಶ್ರೀನಿವಾಸ ಬೆಂಗಳೂರಿನ ಬಾಗಲಗುಂಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಬಾಗಲಗುಂಟೆಯ ಯುವತಿಯನ್ನು ಪ್ರೀತಿಸಿದ್ದು, ಇಬ್ಬರಿಗೂ ಐದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.

ಇಬ್ಬರೂ ಸ್ಕಾರ್ಪಿಯೋ ಕಾರಿನಲ್ಲಿ ಬಿದರಗೆರೆಗೆ ಬಂದು ವಾಪಸ್ ಬೆಂಗಳೂರಿಗೆ ಜಿ.ನಾಗೇನಹಳ್ಳಿ ಬಳಿ ಹೋಗುತ್ತಿದ್ದಾಗ ಮತ್ತೊಂದು ಸ್ಕಾರ್ಪಿಯೋ ವಾಹನದಲ್ಲಿ ಬಂದ ಆರು ಜನರ ಗುಂಪು ಕಾರನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಶ್ರೀನಿವಾಸನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಯುವತಿ ಕಾರಿನಲ್ಲಿಯೇ ಇದ್ದರು.

ADVERTISEMENT

ಸ್ನೇಹಿತರಿಂದಲೇ ಕೊಲೆ: ಶ್ರೀನಿವಾಸ್ ಅವರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಯುವತಿ ಹೇಳಿಕೆ ನೀಡಿದ್ದಾರೆ. ಶ್ರೀನಿವಾಸ್‌ ಹಾಗೂ ಆತನ ಸ್ನೇಹಿತರು ಹಣ್ಣು ಮತ್ತು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಶ್ರೀನಿವಾಸ್ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡಿದ್ದರು. ಇದನ್ನು ಸಹಿಸಲಾಗದೆ ಆತನ ಸ್ನೇಹಿತರೇ ಹೊಂಚುಹಾಕಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದವರಲ್ಲಿ ಬಾಗಲಗುಂಟೆ ರಂಜು, ಮಂಜು ಅಲಿಯಾಸ್ ಬಟ್ಲು, ಮುನಿಯಾ ಎಂಬುವರು ಇದ್ದರು ಎಂದು ಯುವತಿ ಹೇಳಿಕೆ ನೀಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಎಂ.ಪ್ರವೀಣ್, ಸಿಪಿಐ ಎಫ್.ಕೆ.ನದಾಪ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೊಟ್ಟೆನೋವು: ಆತ್ಮಹತ್ಯೆ

ಹೊಟ್ಟೆನೋವು ಹಾಗೂ ಮಕ್ಕಳಾಗಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಸಿದ್ಧರಾಮೇಶ್ವರ ಬಡಾವಣೆ ನಿವಾಸಿ ಬಸವರಾಜು ಆತ್ಮಹತ್ಯೆ ಮಾಡಿಕೊಂಡವರು. ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದು ರಾತ್ರಿ ಮಲಗಿದ್ದ ಬಸವರಾಜು ಬೆಳಗಿನ ಜಾವ 5.30ರ ಸುಮಾರಿಗೆ ಮನೆಯಿಂದ ಹೊರಗಡೆ ಎದ್ದು ಹೋಗಿದ್ದಾರೆ. ಮನೆಯವರು ಶೌಚಕ್ಕೆ ಹೋಗಿದ್ದಾರೆ ಎಂದು ಸುಮ್ಮನಾಗಿದ್ದು, ಕೆಲ ಹೊತ್ತಿನಲ್ಲೆ ಗೋಕುಲ ಬಡಾವಣೆ ರಸ್ತೆ, ಸಂಕ್ರಾಂತಿ ಸ್ಟೋರ್‌‌‌ ಸಮೀಪದಲ್ಲಿರುವ ರಸ್ತೆಯ ಬದಿಯ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಸುಜಾತ ತಿಳಿಸಿದ್ದಾರೆ.

ಪತ್ನಿ ನೀಡಿದ ದೂರಿನ ಮೇರೆಗೆ ಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.