ಉಡುಪಿ: ಕೃಷ್ಣನೂರಿನಲ್ಲಿ ಶುಕ್ರವಾರ ಈದ್ ಉಲ್ ಫಿತ್ರ್ ಸಂಭ್ರಮ ಕಳೆಗ ಟ್ಟಿತ್ತು. ಒಂದು ತಿಂಗಳ ಶ್ರದ್ಧಾ ಭಕ್ತಿಯ ಉಪವಾಸ ವ್ರತಾಚರಣೆಯಲ್ಲಿದ್ದ ಮುಸ್ಲಿಮರು ಹಬ್ಬದ ಕೊನೆಯ ದಿನ ಅಲ್ಲಾಹುವಿಗೆ ವಿಶೇಷ ಪ್ರಾರ್ಥನೆ ಸಲ್ಲಿ ಸುವ ಮೂಲಕ ರಂಜಾನ್ಗೆ ತೆರೆ ಎಳೆದರು.
ಇಲ್ಲಿನ ಜಾಮಿಯಾ ಮಸೀದಿಗೆ ತಂಡೋಪತಂಡವಾಗಿ ಆಗಮಿಸಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಿಗ್ಗೆ 8.30ರ ಸುಮಾರಿಗೆ ಮೌಲಾನ ಅಬ್ದುಲ್ ರಶೀದ್ ಅವರ ನೇತೃತ್ವದಲ್ಲಿ ನಮಾಜ್ ಮಾಡಲಾಯಿತು. ಬಳಿಕ ಮುಸ್ಲಿಮರು ಪರಸ್ಪರ ಆಲಂಗಿಸಿ ಕೊಂಡು ಶುಭಾಶಯ ವಿನಿಮಯ ಮಾಡಿ ಕೊಂಡರು. ಮಕ್ಕಳೂ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಅಂಜುಮನ್ ಮಸೀದಿ ಯಲ್ಲಿ ಬೆಳಿಗ್ಗೆ 9ಕ್ಕೆ ಮೌಲಾನಾ ಇನಾ ಯುತ್ ಉಲ್ಲ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಾಯರ್ಕೆರೆಯಲ್ಲಿರುವ ಹಾಶ್ಮಿ ಮಸೀದಿಯಲ್ಲೂ ನಮಾಜ್ ಮಾಡಲಾಯಿತು. ಬಳಿಕ ಮೌಲಾನ ಹಾಶ್ಮಿ ಉಮ್ರಿ ಅವರ ಮುಂದಾಳತ್ವದಲ್ಲಿ ಮಸೀದಿ ಸಮಿತಿ ಸದಸ್ಯರು ಅನ್ಯ ಧರ್ಮೀ ಯರ ಮನೆಗಳಿಗೆ ತೆರಳಿ ಸಿಹಿ ಹಂಚಿದ್ದು ವಿಶೇಷವಾಗಿತ್ತು. ಬಳಿಕ ರಂಜಾನ್ ಶುಭಾಶಯ ವಿನಿಯಮ ನಡೆಯಿತು.
ನಗರದ ಬಹುತೇಕ ಕಡೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು. ಸಂಬಂಧಿಗಳ ಮನೆಗೆ ತೆರಳಿ ಶುಭಾಶಯ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಂದ್ರಾಳಿ, ಕೊಡವೂರು, ಅಂಬಾಗಿಲು ಸೇರಿದಂತೆ ಹಲವು ಮಸೀದಿಗಳಲ್ಲಿ ಜನಜಂಗುಳಿ ಸೇರಿತ್ತು.
ಸಂಜೆಯಾಗುತ್ತಿದ್ದಂತೆ ಬಗೆಬಗೆಯ ಭಕ್ಷ್ಯಗಳ ಘಮಲು ಹರಡಿತ್ತು. ಬಂಧು ಗಳು, ಸ್ನೇಹಿತರಿಗೆ ಬಿರಿಯಾನಿ, ತರಹೇವಾರಿ ಮಾಂಸದ ಖಾದ್ಯಗಳು, ಪಾಯಸ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ನಮಾಜ್ಗೆ ತೆರಳವ ಮುನ್ನ ಬಡವರ ಮನೆಗಳಿಗೆ ಆಹಾರ ಪದಾರ್ಥಗಳನ್ನು ತಲುಪಿಸಲಾಯಿತು. ಮನೆಯ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತಲಾ 2.5 ಕೆ.ಜಿ, ತೂಕದ ದಿನಬಳಕೆ ವಸ್ತುಗಳನ್ನು ಒಳಗೊಂಡಿದ್ದ ಪೊಟ್ಟಣಗಳನ್ನು ದಾನ ಮಾಡಲಾಯಿತು. ಬಳಿಕ ಉಳ್ಳವರು ಶಕ್ತಾನುಸಾರ ಆರ್ಥಿಕ ನೆರವು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.