ಬೆಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕಂಪೆನಿಗೆ ಸರಪಾಡಿ ಆಣೆಕಟ್ಟಿನಿಂದ 2.5 ಮಿಲಿಯನ್ ಗ್ಯಾಲನ್ ನೀರನ್ನು ಪಡೆದುಕೊಳ್ಳಲು ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಒಂದು ವೇಳೆ ಈ ರೀತಿಯ ನೀರು ಪೂರೈಕೆಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ ಎಂದಾದರೆ ನೀರು ಪೂರೈಕೆಯನ್ನು ಕಡಿತಗೊಳಿಸಬಹುದು ಎಂದು ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ. `ನಾಲ್ಕು ವಾರಗಳ ಕಾಲ ನೀರು ಪೂರೈಕೆ ಮಾಡಿ, ನಂತರ ಏನಾದರೂ ಸಮಸ್ಯೆ ತಲೆ ದೋರುತ್ತ ದೆಯೋ ಎಂಬುದನ್ನು ಗಮನಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ~ ಎಂದು ಅವರು ತಿಳಿಸಿದ್ದಾರೆ.
ನೀರನ್ನು ಪಡೆದುಕೊಳ್ಳದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇದೇ 11ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.
ಅರ್ಜಿದಾರರು (ಎಂಆರ್ಪಿಎಲ್) ಕಚ್ಚಾತೈಲವನ್ನು ಉತ್ಪಾದಿಸುವ ಕಂಪೆನಿ. ಆದುದರಿಂದ ತಮಗೆ ನೀರಿನ ಅಗತ್ಯ ಇದೆ ಎನ್ನುವುದು ಅದರ ವಾದ. ಆದರೆ ನೀರು ಪೂರೈಕೆ ಆಗದ ಕಾರಣ ಅದರ ಕೆಲವೊಂದು ಘಟಕಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅರ್ಜಿಯಲ್ಲಿ ಅದು ತಿಳಿಸಿತ್ತು.
`ಈ ಮೊದಲು ನಮಗೆ ನೇತ್ರಾವತಿ ನದಿಯಿಂದ 5.5 ಮಿಲಿಯನ್ ಗ್ಯಾಲನ್ ನೀರು ಪೂರೈಕೆ ಆಗುತ್ತಿತ್ತು. ಆದರೆ ಸಾರ್ವಜನಿಕರಿಗೆ ನೀರಿನ ತೊಂದರೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನೀರು ಪೂರೈಕೆಯನ್ನು ಮೂರನೇ ಒಂದು ಭಾಗಕ್ಕೆ ಇಳಿಸಿತು. ಇದರಿಂದ ನಮಗೆ ತೀವ್ರ ತೊಂದರೆ ಆಗಿದೆ~ ಎಂದು ಅದು ಕೋರ್ಟ್ನಲ್ಲಿ ವಾದಿಸಿತ್ತು.
ಇಷ್ಟೊಂದು ಪ್ರಮಾಣದ ನೀರು ಪೂರೈಕೆ ಮಾಡಿದರೆ ಮಂಗಳೂರು ನಗರಕ್ಕೆ ನೀರಿನ ವ್ಯತ್ಯಯ ಉಂಟಾಗಲಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್ ಅವರು ಪ್ರತಿವಾದಿಸಿದರು. ಆದರೆ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.
`ಒಂದು ವೇಳೆ ಈ ಕಂಪೆನಿಯ ಘಟಕಗಳನ್ನು ಮುಚ್ಚಿ ಬಿಟ್ಟರೆ, ನೌಕರರು ಬೀದಿ ಪಾಲಾಗ ಬೇಕಾಗುತ್ತದೆ. ಮಳೆಗಾಲ ಸಮೀಪಿಸುತ್ತಿದೆ. ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಈ ಘಟಕಗಳು ಮುಚ್ಚಿದರೆ ಕಾರ್ಮಿಕರು ಹೊಟ್ಟೆಗಿಲ್ಲದೇ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಆದಂತೆ ಕಂಪೆನಿಯನ್ನು ಗುಜರಾತಿಗೋ, ಇನ್ನೆಲ್ಲಿಯೋ ಸ್ಥಳಾಂತರ ಮಾಡಿದರೆ ನಮ್ಮ ರಾಜ್ಯಕ್ಕೆ ನಷ್ಟವಾಗುತ್ತದೆ~ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ನೀರು ಪೂರೈಕೆ ಸಹಜಸ್ಥಿತಿಗೆ
ಮಂಗಳೂರು: ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಸುಧಾರಿಸಿರುವುದರಿಂದ, ಕಳೆದ ಕೆಲವು ದಿನಗಳಿಂದ ಇದ್ದ ನೀರಿನ ಪೂರೈಕೆಯಲ್ಲಿನ ಕಡಿತ ತೆಗೆದುಹಾಕಲಾಗಿದ್ದು, ಮಾಮೂಲಿನಂತೆ ನೀರು ಪೂರೈಕೆಯಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ತಿಳಿಸಿದರು.
ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗಿದ್ದರಿಂದ ತುಂಬೆ ಅಣೆಕಟ್ಟೆಯಲ್ಲಿ ನೀರಿನಪ್ರಮಾಣ ಬುಧವಾರ 12 ಅಡಿಗೆ ಏರಿತ್ತು. ಇದರ ಗರಿಷ್ಠ ಪ್ರಮಾಣ 13 ಅಡಿ. ನೀರಿನ ಪರಿಸ್ಥಿತಿ ಸುಧಾರಿಸಿರುವುದರಿಂದ ಎಂಆರ್ಪಿಎಲ್ಗೂ, ಮುಂದಿನ ಆದೇಶದವರೆಗೆ ಮಾಮೂಲಿನಂತೆ ನೀರು ಪೂರೈಕೆ ಮಾಡಲಾಗುವುದು ಎಂದು ಅವರು ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.