ADVERTISEMENT

ಓದಿನೊಂದಿಗೆ ಸದ್ಗುಣ ಬೆಳೆಸಿ: ಉಪಾಧ್ಯಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 9:54 IST
Last Updated 24 ಸೆಪ್ಟೆಂಬರ್ 2013, 9:54 IST

ಬ್ರಹ್ಮಾವರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡಿ, ಒಳ್ಳೆಯ ಉದ್ಯೋಗವನ್ನು ಪಡೆಯುವಂತೆ ಮಾತ್ರ ಮಾಡುವುದು ಶಿಕ್ಷಕನ ಜವಾಬ್ದಾರಿ ಅಲ್ಲ. ಬದಲಿಗೆ ಬಾಲ್ಯದಿಂದಲೇ ವಿದ್ಯೆಯ ಜೊತೆಗೆ ಸದ್ಗುಣಗಳನ್ನು ಮನಸ್ಸಿನಲ್ಲಿ ತುಂಬಿ ಉತ್ತಮ ನಾಗರಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದು ಎಂದು ಕೋಟ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯಾಯ ಹೇಳಿದರು.

ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಸ್ವರ್ಣ ಭವನದಲ್ಲಿ ಸಾಲಿಗ್ರಾಮದ ಡಾ.ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲ್ಲೂಕು ಘಟಕ, ಕೋಟ ಮಣೂರಿನ ಗೀತಾನಂದ ಫೌಂಡೇಶನ್  ಮತ್ತು ಕೊೋಟ ವಿದ್ಯಾ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ನಡೆದ ನಿವೃತ್ತ ಶಿಕ್ಷಕರ ಸಾಹಿತ್ಯಿಕ ಸಮಾವೇಶ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಹಾಗೂ ನಿವೃತ್ತ ಶಿಕ್ಷಕ ಶ್ರೀಧರ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್,  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ವಿಠಲ್ ವಿ. ಗಾಂವಕರ್ ದಿಕ್ಸೂಚಿ ಬಾಷಣ ಮಾಡಿದರು.

ಸಮಾರಂಭದಲ್ಲಿ ಕೋಟ ಪರಿಸರದ 20ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಉಪೇಂದ್ರ ಸೋಮಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನರಸಿಂಹ ಐತಾಳ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.