ADVERTISEMENT

ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲುಸಲಹೆ

​ಪ್ರಜಾವಾಣಿ ವಾರ್ತೆ
Published 2 ಮೇ 2012, 6:20 IST
Last Updated 2 ಮೇ 2012, 6:20 IST

ಉಡುಪಿ:`ಹೆಚ್ಚಿನ ಮಕ್ಕಳಲ್ಲಿ ಕಣ್ಣಿನ ದೋಷ ಕಂಡು ಬರುತ್ತಿದ್ದು ಪೋಷಕರು ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿಸುವುದು ಒಳ್ಳೆಯದು~ ಎಂದು ಪ್ರಸಾದ್ ನೇತ್ರಾಲಯದ ವೈದ್ಯ ಡಾ.ಎಂ.ಎಸ್. ಕೃಷ್ಣಪ್ರಸಾದ್ ಸಲಹೆ ನೀಡಿದರು.

ಉಡುಪಿಯ ಆಫೀಸರ್ಸ್ ಕ್ಲಬ್, ಪ್ರಸಾದ್ ನೇತ್ರಾಲಯ, ಸ್ವದೇಶಿ ಗ್ರೂಪ್ ಆಫ್ ಕನ್ಸರ್ನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿವಾರಣಾ ವಿಭಾಗ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. 40 ವರ್ಷದ ನಂತರ ನೇತ್ರ ಪರೀಕ್ಷೆ ಮಾಡಿಸಿಕೊಳ್ಳುವುದು ಎಂಬ ಭಾವನೆ ಜನರಲ್ಲಿದೆ.

ಆದರೆ ನೇತ್ರ ಸಮಸ್ಯೆ ಯಾವ ವಯೋಮಾನದಲಿಯಾದರೂ ಬರಬಹುದು. ಜಿಲ್ಲೆಯಲ್ಲಿ 2500 ಮಕ್ಕಳನ್ನು ನೇತ್ರ ಪರೀಕ್ಷೆಗೆ ಒಳಪಡಿಸಿ ದಾಗ 358 ಮಕ್ಕಳಿಗೆ ದೃಷ್ಟಿ ದೋಷ ಇರುವುದು ಗೊತ್ತಾಯಿತು. ಅದರಲ್ಲಿ 250 ಮಂದಿಗೆ ಗಂಭೀರ ಸಮಸ್ಯೆ ಇತ್ತು ಎಂದು ಅವರು ಹೇಳಿದರು.

ದೃಷ್ಟಿ ದೋಷಕ್ಕೆ ಒಳಗಾದವರು ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಕನ್ನಡ ಹಾಕಲು ಹೇಳಿದರೆ ವೈದ್ಯರು ಹೇಳುವವರೆಗೂ ಧರಿಸಬೇಕು. ಕೆಲವೊಮ್ಮೆ ಶಾಶ್ವತವಾಗಿ ಕನ್ನಡಕ ಧರಿಸಬೇಕಾದ ಅನಿವಾರ್ಯತೆ ಸಹ ಇರುತ್ತದೆ ಎಂದರು.

ನೇತ್ರ ತಪಾಸಣೆ ಶಿಬಿರ ಎಂದರೆ ಕೇವಲ ಕಣ್ಣಿನ ಪೊರೆಗೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ಈ ಶಿಬಿರದಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ಕನ್ನಡಕ ಸಹ ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ಬರುವವರಿಗೆ ನೇತ್ರಾಲಯದ ವತಿಯಿಂದ ಊಟದ ವ್ಯವಸ್ಥೆ ಸಹ ಮಾಡಲಾಗುತ್ತದೆ ಎಂದು ಕೃಷ್ಣಪ್ರಸಾದ್ ಹೇಳಿದರು.

`ಈ ಹಿಂದೆ ನಡೆಸಿದ ಶಿಬಿರಗಳಿಂದ ಜನರಿಗೆ ಬಹಳ ಉಪಯೋಗವಾಯಿತು. ಆದ್ದರಿಂದ ಈ ಬಾರಿಯೂ ಶಿಬಿರ ನಡೆಸಲಾಗುತ್ತಿದೆ. ಆಫೀಸರ್ಸ್ ಕ್ಲಬ್ ಜನರಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ಇನ್ನೂ ಮುಂದೆಯೂ ಹಮ್ಮಿಕೊಳ್ಳಲಿದೆ~ ಎಂದು ಕ್ಲಬ್‌ನ ಅಧ್ಯಕ್ಷ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಸ್.ಎ.ಪ್ರಭಾಕರ ಶರ್ಮ, ನಗರಸಭೆ ಪೌರಾಯುಕ್ತ ಗೋಕುಲ್ ದಾಸ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣೆ ಸೊಸೈಟಿಯ ಕಾರ್ಯದರ್ಶಿ ಡಾ. ನಿತ್ಯಾನಂದ ನಾಯಕ್, ಸ್ವದೇಶಿ ಗ್ರೂಪ್ ಆಫ್ ಕನ್ಸರ್ನ್‌ನ ನಾಗೇಶ್ ಹೆಗ್ಡೆ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.