ಕುಂದಾಪುರ: ಎರಡು ದಿನಗಳ ಹಿಂದೆ ಅಕಾಲಿಕವಾಗಿ ಬಿದ್ದ ಮಳೆ ಗಾಳಿ ಯಿಂದಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ಹಾಗೂ ಉಡುಪಿ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿನ ರೈತರ ಬೆಳೆಗಳಿಗೆ ಹಾನಿ ಉಂಟಾಗಿದೆ. ಜಿಲ್ಲಾಡಳಿತ ತಕ್ಷಣವೇ ಈ ಹಾನಿ ಬಗ್ಗೆ ವರದಿ ಪಡೆದುಕೊಂಡು ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಮನವಿ ಮಾಡಿದ್ದಾರೆ.
ಶುಕ್ರವಾರ ಸಂಜೆ ಇಲ್ಲಿನ ತಾಪಂ ಕಚೇರಿಯಲ್ಲಿ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಅವರನ್ನು ಭೇಟಿ ಮಾಡಿ ಉಡುಪಿ ಜಿಲ್ಲಾಧಿಕಾರಿಗೆ ಮನವಿಯನ್ನು ನೀಡುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಬುಧವಾರ ರಾತ್ರಿ ಅಕಾಲಿಕವಾಗಿ ಸುರಿದ ಮಳೆ ಹಾಗೂ ಬೀಸಿದ ಗಾಳಿಯಿಂದಾಗಿ ಬಾಳೆ ತೋಟ, ತರಕಾರಿ ಬೆಳೆ, ಕಲ್ಲಂಗಡಿ ಹಣ್ಣು, ನೆಲಗಡಲೆ ಸೇರಿದಂತೆ ಧಾನ್ಯಗಳ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಭಾರಿ ಗಾಳಿ ಹಾಗೂ ಸಿಡಿಲಿನಿಂದಾಗಿ ಕಟ್ಟಡ ಹಾಗೂ ಕೃಷಿ ತೋಟಗಳಿಗೂ ಹಾನಿ ಆಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಇದರಿಂದಾಗಿ ಅಪಾರ ಪ್ರಮಾಣದ ಹಾನಿ ಆಗಿದ್ದು, ಕೂಡಲೇ ಜಿಲ್ಲಾಡಳಿತ ಹಾನಿಯ ವಿವರವನ್ನು ಪಡೆದು ಸಂತೃಸ್ತರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವಾನಂದ ಶೆಟ್ಟಿ ಈ ಸಂದರ್ಭದಲ್ಲಿ ಇದ್ದರು.
ಗ್ರಾಮಸಭೆ 24ಕ್ಕೆ
ಬೈಂದೂರು: ಕಿರಿಮಂಜೇಶ್ವರ ಗ್ರಾಮ ಸಭೆ 24 ರಂದು ಬೆಳಿಗ್ಗೆ 10.30ಕ್ಕೆ ನಾಗೂರು ಕೃಷ್ಣಲಲಿತಾ ಕಲಾಮಂದಿರದಲ್ಲಿ ನಡೆಯುವುದು. ಪೂರ್ವಭಾವಿಯಾಗಿ 22ರ ಬೆಳಿಗ್ಗೆ 10ಕ್ಕೆ ನಾಗೂರು 1ನೆ ವಾರ್ಡ್ ಸಭೆ, ಮಧ್ಯಾಹ್ನ 12ಕ್ಕೆ ಕಿರಿಮಂಜೇಶ್ವರ dಲ್ಲಿ 2ನೆ ವಾರ್ಡ್ಸಭೆ, 3ಕ್ಕೆ ಹೊಸಹಿತ್ಲು ರಾಮ ಭಜನಾ ಮಂದಿರದಲ್ಲಿ 3ನೆ ವಾರ್ಡ್ ಸಭೆ, 23ರ ಬೆಳಿಗ್ಗೆ 10.30ಕ್ಕೆ ಹಾಡಿಸ್ಥಳ ಜಟ್ಟಿಗೇಶ್ವರ ದೇವಸ್ಥಾನದಲ್ಲಿ 4ನೆ ವಾರ್ಡ್ಸಭೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.