ಸುಬ್ರಹ್ಮಣ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಕನಸನ್ನು ಜನರ ಮುಂದೆ ಬಿತ್ತಿದ್ದಾರೆ. ಇದೀಗ ಅದರ ಭಾಗವಾಗಿ ಗ್ರಾಮೀಣ ಪ್ರದೇಶ ದಲ್ಲೂ ಮೊಬೈಲ್, ಇಂಟರ್ನೆಟ್ ಲಭ್ಯವಾಗಬೇಕು ಎಂಬ ಉದ್ದೇಶ ಇದೆ. ಇದೀಗ ಈ ಕನಸು ಸಾಕಾರವಾಗುತ್ತಿದೆ ಎಂದು ಟೆಲಿಕಾಂ ಸಲಹಾ ಸಮಿತಿ
ಸದಸ್ಯ ವೆಂಕಟ್ ದಂಬೆಕೋಡಿ ಹೇಳಿದರು.
ಅವರು ಭಾನುವಾರ ಗುತ್ತಿಗಾರು ಗ್ರಾಮದ ಕಮಿಲದಲ್ಲಿ ಬಿಎಸ್ಎನ್ಎಲ್ ನೂತನ ಮೊಬೈಲ್ ಟವರ್ಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಮಿಲ ಪ್ರದೇಶದ ಜನರ ಬಹು ದಿನದ ಬೇಡಿಕೆ ಈಡೇರಿಕೆಯಾಗುತ್ತಿದೆ. ಅತಿ ಶೀಘ್ರದಲ್ಲೇ ಮೊಬೈಲ್ ಟವರ್ ನಿರ್ಮಾಣವಾಗಿ ಜನತೆಯ ಆಶಯ ಈಡೇರಲಿದೆ. ಪ್ರಧಾನಿ ಆಶಯವಾದ ಡಿಜಿಟಲ್ ಇಂಡಿಯಾ ಕನಸು ಸಾಕಾರಕ್ಕೆ ಕೂಡಾ ಕಾರಣವಾಗಲಿದೆ ಎಂದರು.
ಮುರಳಿಕೃಷ್ಣ ಭಟ್ ವಳಲಂಬೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ತಾಲ್ಲೂಕು ಪಂಚಾಯಿತಿ ಯಶೋದಾ ಬಾಳೆಗುಡ್ಡೆ, ಅಶೋಕ್ ನೆಕ್ರಾಜೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮೊದಲಾದವರು ಇದ್ದರು.