ADVERTISEMENT

ಚಾರಿತ್ರ್ಯವಿಲ್ಲದ ಸಾಹಿತ್ಯ ತೋರಿಕೆಯದ್ದು

​ಪ್ರಜಾವಾಣಿ ವಾರ್ತೆ
Published 11 ಜುಲೈ 2014, 8:08 IST
Last Updated 11 ಜುಲೈ 2014, 8:08 IST

ಕಾರ್ಕಳ:  ಬದುಕಿನಲ್ಲಿ ಪ್ರಮಾಣಿಕತೆ ಇಲ್ಲದಿರು­ವುದೇ ಚಾರಿತ್ರ್ಯ ರಹಿತ ಸಾಹಿತ್ಯ ರಚನೆಗೆ ಕಾರಣ­ವಾಗಿದೆ. ಅಂತಹ ಸಾಹಿತ್ಯ ಕೇವಲ ತೋರಿಕೆ ಸಾಹಿತ್ಯವಾಗಲಿದೆ ಎಂದು ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.

ಇಲ್ಲಿನ ಅನಂತಶಯನದ ಹೊಟೇಲ್‌ ಪ್ರಕಾಶದ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಿಸಿದ ‘ಅವತಂಸ’ ಎಂಬ ಕೃತಿಯನ್ನುಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಿಂದಿನ ಸಾಹಿತಿಗಳ ಸಾಹಿತ್ಯದಲ್ಲಿ ಸತ್ಯವೇ ಕಾಣು­ತ್ತಿತ್ತು. ಆದರೆ, ಇಂದಿನವರ ಸಾಹಿತ್ಯದಲ್ಲಿ ಅಸತ್ಯ­ಗಳೇ ಕಾಣಿಸುತ್ತಿವೆ. ಮನುಷ್ಯರನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡುವ ಸಾಹಿತ್ಯ ಸಂಘಟನೆಗಳು ದುರ್ಬಲವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಸಾಹಿತ್ಯ ವಲಯ ದುರ್ಬಲವಾಗುತ್ತಿರುವ ಈ ಕಾಲಘಟ್ಟದಲ್ಲಿ ಶಾಸ್ತ್ರಬದ್ಧವಾಗಿ ಉತ್ತಮವಾ­ದುದನ್ನು ಉಳಿಸಿಕೊಳ್ಳುವ ಕೆಲಸ ‘ಅವತಂಸ’ದಂತಹ ಕೃತಿಗಳ ಮೂಲಕ ನಡೆಯುತ್ತಿರುವುದು ಆಶಾ­ದಾಯಕ ಸಂಗತಿ ಎಂದರು. 

ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ ಕೃತಿಯನ್ನು ಪರಿಚಯಿಸಿದರು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ. ಎಚ್.ಹೆರಂಜೆ ಕೃಷ್ಣ ಭಟ್ ಶುಭಾಶಂಸನೆಗೈದರು.  ಪ್ರೊ.ರಮೇಶ್ ಕಾರ್ಣಿಕ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಾಹಿತ್ಯ ಸಂಘದ ಸಂಚಾಲಕ ಪ್ರೊ.ಎಂ.ರಾಮಚಂದ್ರ ಸ್ವಾಗತಿಸಿದರು. ಶಿಕ್ಷಕ ಮುನಿರಾಜ ರೆಂಜಾಳ  ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ.ಪದ್ಮನಾಭ ಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.