ADVERTISEMENT

ಜೆಡಿಎಸ್‌ಗೆ ಮುನ್ನಡೆ: ಸಾಲ್ಯಾನ್‌ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 10:57 IST
Last Updated 26 ಏಪ್ರಿಲ್ 2013, 10:57 IST

ಶಿರ್ವ: ಕಾಪು ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಜಾತ್ಯತೀತ ತತ್ವದ ಜೆಡಿಎಸ್ ಪಕ್ಷಕ್ಕೆ ಮತದಾರರು ಆಶೀರ್ವದಿಸಲಿದ್ದು, ಈ ಭಾಗದಲ್ಲಿ ಪಕ್ಷವು ಮುನ್ನಡೆ ಸಾಧಿಸಲಿದೆ ಎಂದು ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ವಿ.ಸಾಲ್ಯಾನ್ ತಿಳಿಸಿದರು.

ಕಟಪಾಡಿ ಎಣಗುಡ್ಡೆಯ ಅವರ ನಿವಾಸದಲ್ಲಿ ಬುಧವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್‌ನಿಂದ ನಾನು ಮೋಸ ಹೋಗಿರುವುದರಿಂದ ಇದೀಗ ಅನಿವಾರ್ಯವಾಗಿ ಜೆಡಿಎಸ್ ಮೂಲಕ ಮತದಾರರ ಬಳಿಗೆ ಹೋಗುತ್ತಿದ್ದೇನೆ. ನನ್ನ ಹಿಂದಿರುವ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಪರೋಕ್ಷವಾಗಿ ನನ್ನನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಹೆಚ್ಚಿನ ಕಾಂಗ್ರೆಸ್ ಕಾರ್ಯ ಕರ್ತರು ಪಕ್ಷ ತೊರೆದು ನನ್ನೊಂದಿಗೆ ಜೆಡಿಎಸ್ ಸೇರಿದ್ದಾರೆ ಎಂದರು.

ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ವಸಂತ ವಿ.ಸಾಲ್ಯಾನ್ ಪರ ಅನೇಕರು ಅನುಕಂಪ ವ್ಯಕ್ತಪಡಿಸಿ, ಜೆಡಿಎಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಸಾಲ್ಯಾನರ ನಿಷ್ಠಾವಂತ ಹಾಗೂ ಕ್ರಿಯಾಶೀಲ ರಾಜಕಾರಣದ ಪ್ರಭಾವದಿಂದಾಗಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂದ ಅವರು, ವಸಂತ ವಿ.ಸಾಲ್ಯಾನ್ ಅವರ ಪರವಾಗಿ ಪ್ರಚಾರ ನಡೆಸಲು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ್ ಸ್ವಾಮಿ ಹಾಗೂ ಮಧು ಬಂಗಾರಪ್ಪ ಸದ್ಯದಲ್ಲೇ ಕಾಪು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದರು.

ಕಾಪು ಕ್ಷೇತ್ರವ್ಯಾಪ್ತಿಯ ಆತ್ರಾಡಿ, ಕೊರಂಗ್ರ ಪಾಡಿ, ಬಡಗಬೆಟ್ಟು, ಕಟಪಾಡಿ, ಕೋಟೆ, ಶಿರ್ವ, ಮಲ್ಲಾರು, ಇನ್ನಂಜೆ ಭಾಗಗಳ ಸುಮಾರು 200ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ವಸಂತ ಸಾಲ್ಯಾನರನ್ನು ಬೆಂಬಲಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಜೆಡಿಎಸ್ ಪ್ರಮುಖರಾದ ವಾಸುದೇವ ರಾವ್, ಉದಯ ಹೆಗ್ಡೆ,ಯೋಗೇಶ್ ಶೆಟ್ಟಿ, ಎ.ಕೆ.ಸುಲೇಮಾನ್,ರೆಹಮಾನ್ ಸಾಹೇಬ್, ಗಂಗಾಧರ್ ಸುವರ್ಣ, ಸುಶೀಲ್ ಬೋಳಾರ್, ಸುಮನ್ ಬೋಳಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.