ADVERTISEMENT

`ಜ್ಞಾನದ ಹಸಿವು ನೀಗಿಸಬಲ್ಲ ಪುಸ್ತಕ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:56 IST
Last Updated 6 ಸೆಪ್ಟೆಂಬರ್ 2013, 6:56 IST

ಉಡುಪಿ: `ವೈಜ್ಞಾನಿಕ, ಭಾಷಾ ವಿಜ್ಞಾನ ಹಾಗೂ ಇನ್ನಿತರ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಪುಸ್ತಕಗಳು ಜ್ಞಾನದ ಹಸಿವನ್ನು ನೀಗಿಸಬಲ್ಲವು' ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪರಮೇಶ್ವರ್ ಭಟ್ ತಿಳಿಸಿದರು.

ಯೂನಿರ್ವಸಲ್ ಬುಕ್ ಸೆಂಟರ್ ವತಿಯಿಂದ ಉಡುಪಿಯ ಬೋರ್ಡ್ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿರುವ 60 ದಿನಗಳ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮನುಷ್ಯನ ಜೀವನವನ್ನು ಪರಿವರ್ತಿಸಿ ಮನಸ್ಸನ್ನು ಅರಳಿಸುವಂತಹ ಪುಸ್ತಕಗಳನ್ನು ಸಂಗ್ರಹಿಸಿ ಪ್ರದರ್ಶ ನವನ್ನು ಏರ್ಪಡಿಸಿರುವುದು ಪ್ರಶಂಸನಿಯ' ಎಂದು ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಎಸ್. ಮಾಧವಿ ಭಂಡಾರಿ ಹೇಳಿದರು.

`ಪುಸ್ತಕಗಳು ಯೌವನದಲ್ಲಿ ಮಾರ್ಗದರ್ಶನವನ್ನು, ವೃದ್ಧಾಪ್ಯದಲ್ಲಿ ಮನರಂಜನೆಯನ್ನು ನೀಡುವ ಮೂಲಕ ಮನುಷ್ಯ ಜೀವನವನ್ನು ಪರಿಪೂರ್ಣವನ್ನಾಗಿಸಿ, ಜ್ಞಾನದ ಹೆಬ್ಬಾಗಿಲನ್ನು ತೆಗೆಯುವ ಕೀಲಿಕೈಯಾಗಿವೆ. ಮಕ್ಕಳ ಮುಂದೆ ಪುಸ್ತಕಗಳಿದ್ದಾಗ ಓದಬೇಕೆನ್ನುವ ಮನಸ್ಸು ಮೂಡುತ್ತದೆ. ಹೆತ್ತವರು ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲೂ ಓದುವ ಆಸಕ್ತಿ ಹುಟ್ಟಿಕೊಳ್ಳುತ್ತದೆ' ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಜಿ.ಐ.ನಳಿನಿ ಹೇಳಿದರು. ಸಮಾಜ ಸೇವಕ ಪ್ರತಾಪ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು. ಪ್ರದರ್ಶನ ಮಳಿಗೆಯ ವ್ಯವಸ್ಥಾಪಕ ಭೂಪೇಶ್ ಪಾಲನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.