ADVERTISEMENT

ನಾಯಕತ್ವ ಗುಣಕ್ಕೆ ರೋಟರಿ ಸಹಕಾರಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 6:20 IST
Last Updated 6 ಜುಲೈ 2012, 6:20 IST

ಉಡುಪಿ: `ವ್ಯಕ್ತಿತ್ವ ರೂಪಿಸಿಕೊಳ್ಳಲು ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ರೋಟರಿ ಸಂಸ್ಥೆ ಸಹಕಾರಿಯಾಯಿತು~ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ನಡೆದ ರೋಟರಿ ಉಡುಪಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಉಡುಪಿಯ 2012-13ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ರೋಟರಿ ಅಧ್ಯಕ್ಷನಾಗಿ ನಾನು ವ್ಯಕ್ತಿತ್ವವನ್ನು ರೂಪಿಸಿಕೊಂಡೆ. ರೋಟರಿಗೆ ಸೇರಿದ ನಂತರ ಸಭಾ ಕಂಪನವೂ ದೂರವಾಯಿತು ಎಂದರು.

`ಸರ್ಕಾರಿ ಅಧಿಕಾರಿಯಾಗಿ ರೋಟರಿ ಸಭೆಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿರುವುದಕ್ಕೆ ಸಂತಸವಾಗಿದೆ. ಪೋಲಿಯೊದಂತಹ ಮಾರಕ ಕಾಯಿಲೆಯನ್ನು ನಿರ್ಮೂಲನ ಮಾಡುವಲ್ಲಿ ರೋಟರಿ ಕೈಗೊಂಡ ವಿಶ್ವವ್ಯಾಪಿ ಕಾರ್ಯಕ್ರಮ ಸ್ತುತ್ಯಾರ್ಹ.
 
ಸರ್ಕಾರದ ಅನೇಕ ಜನಪರ ಕಾರ್ಯಕ್ರಮಗಳು ಪರಿಣಾಮ ಕಾರಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಲು ರೋಟರಿ ಜಿಲ್ಲಾ ಪಂಚಾಯಿತಿ ಜತೆ ಕೈಜೋಡಿ ಸಬೇಕು~ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಭಾಕರ ಶರ್ಮ ಕರೆ ನೀಡಿದರು.

ಪ್ರಸಕ್ತ ಸಾಲಿನ ಅಧ್ಯಕ್ಷ ಐ.ಕೆ.ಜಯಚಂದ್ರ ಹಾಗೂ ಕಾರ್ಯದರ್ಶಿ ಬಿ.ವಿ.ಲಕ್ಷ್ಮಿನಾರಾಯಣ ಅವರನ್ನು ರೋಟರಿ ಉಡುಪಿ ರಜತ ವರ್ಷದ ಅಧ್ಯಕ್ಷರೂ ಆಗಿದ್ದ  ಕೆ.ರಘುಪತಿ ಭಟ್ ರೋಟರಿ ಪದವಿ ಪಿನ್ ತೊಡಿಸಿ ವಿದ್ಯುಕ್ತವಾಗಿ ಪದ ಪ್ರದಾನಗೈದರು.

ತಮ್ಮ ನೂತನ ತಂಡವನ್ನು ಪರಿಚಯಿಸಿದ ಐ.ಕೆ.ಜಯಚಂದ್ರ, ರೋಟರಿ ತತ್ವಗಳಿಗೆ ಅನುಸಾರವಾಗಿ ಉಡುಪಿ ರೋಟರಿಯನ್ನು ಮುನ್ನೆಡೆಸಲು ಸರ್ವರ ಸಹಕಾರ ಕೋರಿದರು.

ರೋಟರಿ ಜಿಲ್ಲೆ 3180ರ ವಲಯ 2ರ ಅಸಿಸ್ಟೆಂಟ್ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿ, ಉಡುಪಿ ರೋಟರಿಯ ಗೃಹ ಪತ್ರಿಕೆ  `ಕಾಂಚ್~ ಅನ್ನು ಅನಾವರಣಗೊಳಿಸಿದರು.

ರೋಟರಿಯ ನಿರ್ಗಮನ ಅಧ್ಯಕ್ಷ ಬಿ.ಜಿ. ವಾರಂಬಳ್ಳಿ ಸ್ವಾಗತಿಸಿ, ವಿದಾಯ ಭಾಷಣ ಮಾಡಿದರು. ಶಕುಂತಲಾ ವಂದಿಸಿದರು. ಪ್ರತಿಕ್ಷಾ ಮತ್ತು ಶ್ರಾವ್ಯ ಬಾಸ್ರಿ  ಪ್ರಾರ್ಥನೆಗೈದರು. ಅಧ್ಯಾಪಕ ಎ.ಆರ್.ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.