ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಸ್ವಂತ ನೆಲೆ ಇಲ್ಲದವರಿಗೆ ಶಾಶ್ವತ ನೆಲ ಕಲ್ಪಿಸುವ ಉದ್ದೇಶದಿಂದ, ನಿವೇಶನ ರಹಿತರಿಗೆ ನಿವೇಶನ ನೀಡುವ ಕುರಿತಂತೆ ಸತತ ಪ್ರಯತ್ನ ನಡೆಸಿ, ಅರ್ಹ 679 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಶನಿವಾರ ನಗರಸಭಾ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ರಹಿತರಿಗೆ ಉಚಿತ ನಿವೇಶನ ನೀಡುವ ಕುರಿತು ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ 27 ಸಭೆಗಳನ್ನು ನಡೆಸಲಾಗಿದೆ, ನಗರಸಭಾ ವ್ಯಾಪ್ತಿಯಲ್ಲಿ ಲಭ್ಯವಿರುವ ಜಾಗದ ಕುರಿತಂತೆ ಪರಿಶೀಲಿಸಿ ಹೆರ್ಗ ಮತ್ತು ಶಿವಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಿಸಲಾಗಿದೆ. ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಪರಿಶಿಷ್ಟ ಜಾತಿ 43, ಪರಿಶಿಷ್ಟ ಪಂಗಡದ 31, ಮುಸ್ಲಿಂ ಸಮುದಾಯದ 85, ಕ್ರೈಸ್ತ ಸಮುದಾಯದ 30 , ಇತರೆ ವರ್ಗದ 445 ಮತ್ತು ಸಸ್ಯಾಹಾರಿ ವರ್ಗದ 20 ಹಾಗೂ 25 ಅಂಗವಿಕಲರಿಗೆ ನಿವೇಶನ ಗುರುತಿಸಲಾಗಿದೆ, ಅಂಗವಿಕಲರಿಗೆ ನೆಲ ಅಂತಸ್ತಿನಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
ಮನೆ ನಿರ್ಮಾಣಕ್ಕೆ ಸರರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹ 3.30ಲಕ್ಷ ಮತ್ತು ಇತರೆ ವರ್ಗದವರಿಗೆ ₹ 2.70ಲಕ್ಷ ಅನುದಾನ ದೊರೆಯಲಿದ್ದೆ. ಮನೆ ನಿರ್ಮಾಣಕ್ಕೆ ತಗಲುವ ಹೆಚ್ಚುವರಿ ಮೊತ್ತವನ್ನು ಬ್ಯಾಂಕ್ಗಳ ಮೂಲಕ 20 ವರ್ಷಗಳ ಅವಧಿಯ, ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುವುದು ಎಂದರು.
ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಎಲ್ಲ ಅಗತ್ಯ ಅನುಮತಿ, ನೀರು ಮತ್ತು ವಿದ್ಯುತ್ ಸಂಪರ್ಕ ಎಲ್ಲವನ್ನೂ ನಗರಸಭೆಯಿಂದ ಮಾಡಲಾಗುತ್ತಿದೆ. 430 ಚದರ ಅಡಿ ಸುಸಜ್ಜಿತ ಮನೆ ನಿರ್ಮಾಣ ಮಾಡಲಾಗುತ್ತದೆ. ಹೆರ್ಗ ಸಣ್ಣಕ್ಕಿಬೆಟ್ಟು ಮತ್ತು ಮಂಚಿಯಲ್ಲಿ ನೆಲ ಅಂತಸ್ತು, ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಮನೆ ನಿರ್ಮಿಸಲಾಗುವುದು ಹಾಗೂ ಈ ನಿರ್ಮಾಣ ಕಾಮಗಾರಿಯನ್ನು ವಿ4 ಡೆವಲಪರ್ಸ್ ಸಂಸ್ಥೆ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.
ಹೆರ್ಗದಲ್ಲಿ ನಿರ್ಮಾಣಗೊಳ್ಳುವ ಮನೆಗಳಿಗೆ ರಸ್ತೆ ಸಂಪರ್ಕಕ್ಕಾಗಿ ₹ 50 ಲಕ್ಷ ಅದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಎಲ್ಲ ಪ್ರದೇಶಗಳಿಗೆ ಜೆ–ನರ್ಮ್ ಬಸ್ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬಾಕಿ ನಿವೇಶನ ರಹಿತರಿಗೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಅವರಿಗೂ ಸಹ ನಿವೇಶನ ನೀಡಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನೊರೋನ್ಹಾ,ಲೀಡ್ ಬ್ಯಾಂಕ್ ವ್ಯವಸ್ಥಾಪಕ ಫ್ರಾನ್ಸಿಸ್ ಬೋರ್ಗಿಯಾ, ಕಾರ್ಪೊರೇಷನ್ ಕಂದಾಯ ಇಲಾಖೆಯ ಅಧಿಕಾರಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.