ಪಡುಬಿದ್ರಿ: ಪಕ್ಷಕ್ಕೆ ಸೇರಿದವರಿಂದ ಕುಟುಂಬದವರ ಎಲ್ಲ ಮತವನ್ನು ಬಿಜೆಪಿಗೆ ಕೊಡಿಸುವುದಾಗಿ ವೇದಿಕೆಯಲ್ಲೇ ಪ್ರಮಾಣ ಮಾಡಿಸಿಕೊಂಡ ಘಟನೆ ಪಡುಬಿದ್ರಿಯಲ್ಲಿ ಗುರುವಾರ ನಡೆಯಿತು.
ಪಡುಬಿದ್ರಿ ಅಮರ್ಕಂಫರ್ಟ್ಸ್ನ ಸಿರಿಗಾರ್ಡನ್ನಲ್ಲಿ ಗುರುವಾರ ಸಂಜೆ ಕಾಪು ಬಿಜೆಪಿ ಮಹಿಳಾ ಮೋರ್ಚಾ ಆಶ್ರಯದಲ್ಲಿ ನಡೆದ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ 35ಕ್ಕೂ ಅಲ್ಪಸಂಖ್ಯಾತ ಮುಸ್ಲಿಂ ಯುವಕರನ್ನು ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.
ಭಾಷಣದ ಮಧ್ಯೆ ಪಕ್ಷದ ಮುಖಂಡರಾದ ತಾರಾ ಅವರು, ಪಕ್ಷ ಸೇರಿದ ಮುಖಂಡರೊಬ್ಬರನ್ನು ವೇದಿಕೆಗೆ ಕರೆಸಿ ಬಿಜೆಪಿಗೆ ಸೇರಿದ 35ಯುವಕರ ಕುಟುಂಬಗಳ ಎಲ್ಲಾ ಮತಗಳನ್ನು ಬಿಜೆಪಿಗೆ ಕೊಡಿಸುವುದಾಗಿ ಪ್ರಮಾಣ ಮಾಡಿಸಿದರು.
ಇದೇ ವೇಳೆ 3 ಮಹಿಳೆಯರೂ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ತಾರಾ, `ಅವಿಭಜಿತ ದ.ಕ ಜಿಲ್ಲೆಯಲ್ಲಿ ಮಹಿಳೆಯರಿಗೆ ನೀಡುವಷ್ಟು ಗೌರವ ಬೇರೆಲ್ಲೂ ದೊರಕದು. ಇಲ್ಲಿನ ಧಾರ್ಮಿಕ ಕ್ಷೇತ್ರಗಳೂ ವಿಶಿಷ್ಟ ಮುದ ನೀಡವಂತಹದ್ದು~ ಎಂದರು. ಈ ಭಾರಿ ಚುನಾವಣೆಯುಲ್ಲಿ ಬಿಜೆಪಿ ಬೆಂಬಲಿಸುವಂತೆ ವಿನಂತಿಸಿದರು.
ಬಿಜೆಪಿ ನಾಯಕಿ ಎರ್ಮಾಳು ಶೀಲಾ ಶೆಟ್ಟಿ ಮಾತನಾಡಿ, `ಮಲ್ಪೆಯ ರೇವ್ ಪಾರ್ಟಿಯಲ್ಲಿ ನಡೆದ ಅಶ್ಲೀಲತೆಯ ಬಗ್ಗೆ ನಮ್ಮ ಶಾಸಕರಿಗೆ ಅರಿವು ಇರಲಿಲ್ಲ. ಅಲ್ಲಿಗೆ ಹೋಗಿ ಬಂದು ವಿಷಯ ತಿಳಿದ ಬಳಿಕ ಕ್ಷಮಾಪಣೆ ಕೇಳಿದ್ದರು~ ಎಂದರು.
ಕಾಪು ಶಾಸಕ ಲಾಲಾಜಿ ಮೆಂಡನ್ ಅಧ್ಯಕ್ಷತೆ ವಹಿಸಿಕೊಂಡರು. ಪಕ್ಷ ಮುಖಂರುಗಳಾದ ರವೀಂದ್ರನಾಥ್ ಜಿ.ಹೆಗ್ಡೆ, ಸುಲೋಚನಾ ಭಟ್, ನವೀನ್ಶೆಟ್ಟಿ ಕುತ್ಯಾರು, ಮಟ್ಟಾರು ರತ್ನಾಕರ ಹೆಗ್ಡೆ, ಗೀತಾಂಜಲಿ ಸುವರ್ಣ, ಶೀಲಾ ಕೆ.ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಶ್ಯಾಮಲಾ ಕುಂದರ್, ಜಯಶ್ರಿ ಪೂಜಾರಿ, ಶಾರದಾ ಪೂಜಾರಿ, ಇಂದಿರಾ ಲಾಲಾಜಿ, ವಿಜಯಲಕ್ಷಿ ಆಚಾರ್ಯ, ಪ್ರಿಯಾಂಕ ಸುನೀಲ್ ಕುಮಾರ್, ಮಾಧವ ಸುವರ್ಣ, ರಮಕಾಂತ, ಸುಮಿತ್ರಾ ಆಚಾರ್ಯ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.