ADVERTISEMENT

ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಬೆಳೆಸಿ:ಸಲಹೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:26 IST
Last Updated 27 ಡಿಸೆಂಬರ್ 2012, 7:26 IST

ಹೆಬ್ರಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ `ಹಿರಿಯರೆಡೆಗೆ ಸಾಹಿತ್ಯ ನಡಿಗೆ' ಮಾಲಿಕೆಯ 8ನೇ ಕಾರ್ಯಕ್ರಮ ಶನಿವಾರ ಕುಚ್ಚೂರಿನಲ್ಲಿ ನಡೆಯಿತು.

ಕುಚ್ಚೂರು ಶಾನುಭೋಗ ಮನೆತನದ ಜಾನಪದ ಸಾಹಿತ್ಯದ ಹಿರಿಯಜ್ಜಿ, ಸ್ವಾತಂತ್ರ್ಯ ಹೋರಾಟಗಾರ್ತಿ ಪದ್ಮಾವತಿಯಮ್ಮ ಅವರನ್ನು ಅವರ ಕುಚ್ಚೂರು ಮನೆಯಲ್ಲಿ ಕಸಾಪ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಹಾಡಿನ ಮೂಲಕ ಉತ್ತರಿಸಿದ ಪದ್ಮಾವತಿಯಮ್ಮ ಅವರು ತಮ್ಮ ಬಾಲ್ಯ ಹಾಗೂ ಯೌವ್ವನದ ಅನುಭವಗಳನ್ನು ಹಂಚಿಕೊಂಡರು. ಮಕ್ಕಳಿಗೆ ಹೆಣ್ಣು, ಗಂಡು ಎಂಬ ಭೇದವಿಲ್ಲದೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಎಲ್ಲರೂ ಗೌರವಿಸುವ ನಾಗರಿಕರಾಗುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿ ಸನ್ಮಾನ ನೆರವೇರಿಸಿದರು.
ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಪೇಂದ್ರ ಸೋಮಯಾಜಿ, ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಸಿ.ರಾವ್, ರಂಗಪ್ಪಯ್ಯ ಹೊಳ್ಳ, ಕೃಷ್ಣಮೂರ್ತಿ ರಾವ್, ಸುಬ್ರಹ್ಮಣ್ಯ, ಹಿರಿಯ ಪತ್ರಕರ್ತ ಮಂಜುನಾಥ ಚಡಗ, ನಾರಾಯಣ ಮಡಿ ಮೊದಲಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಸುಕನ್ಯಾ , ಕಾಳು ಶೆಟ್ಟಿ ಹಾಗೂ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರವಣ್ ಕುಮಾರ್ ಪ್ರಾರ್ಥಿಸಿ, ಬಿ.ಸಿ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಳೀಧರ ಭಟ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.