ADVERTISEMENT

ಬಿಲ್ಲವ ಬಳಗದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 9:10 IST
Last Updated 7 ಅಕ್ಟೋಬರ್ 2012, 9:10 IST

ಬ್ರಹ್ಮಾವರ: ನಿವೇಶನಗಳಲ್ಲಿ ವಾಸ್ತವ್ಯವಿ ರುವವರಿಗೆ ಹಲವು ವರ್ಷಗಳಿಂದ ಹಕ್ಕುಪತ್ರ ನೀಡದ ಸರ್ಕಾರದ ವಿತರಣೆಯ ಗೊತ್ತುವಳಿಯನ್ನು ರಾಜ್ಯಪಾಲರು ತಡೆಹಿಡಿದ ಕ್ರಮದ ವಿರುದ್ಧ ಬ್ರಹ್ಮಾವರದ ಬ್ರಹ್ಮಶ್ರೀ ಬಿಲ್ಲವ ಬಳಗ, ಇಂದಿರಾನಗರ ವಾರಂಬಳ್ಳಿ ನವೋದಯ ಯುವಕ ಮಂಡಲ, ಹಂದಾಡಿ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಬಸ್ ನಿಲ್ದಾಣದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಲ್ಲವ ಸಂಘದ ಬಾರ್ಕೂರು ಸತೀಶ್ ಪೂಜಾರಿ “ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ರಹಿತರ ಪಟ್ಟಿ ಆಧರಿಸಿ ಬಡ ಜನರಿಗೆ ನಿವೇಶನಗಳನ್ನು ನೀಡಿ ಇಲ್ಲಿಯವರೆಗೂ ಅವರಿಗೆ ಪತ್ರಗಳನ್ನು ನೀಡದೇ ಅವರು ಯಾವುದೇ ಸರ್ಕಾರದ ಯೋಜನೆಗಳ ಲಾಭ ಪಡೆಯದಂತೆ ಮಾಡಿದ ಕ್ರಮ ಖಂಡನೀಯ ಎಂದರು.

ಇತ್ತೀಚೆಗೆ ಸರ್ಕಾರದ ಈ ಬಗ್ಗೆ ಗೊತ್ತುವಳಿಯನ್ನು ಮಂಡನೆ ಮಾಡಿದರೂ ಯಾವುದೋ ಉದ್ದೇಶದಿಂದ ರಾಜ್ಯಪಾಲರು ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಗೊತ್ತುವಳಿಗೆ ಸಹಿ ಹಾಕದೇ ತಡೆ ಹಿಡಿದಿರುವುದರಿಂದ ಬಡ ಜನರಿಗೆ ಅನ್ಯಾಯವಾಗಿದೆ ಎಂದರು.

ನಂತರ ಪ್ರತಿಭಟನಾಕಾರರು ನಗರದ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಗ್ರಾಮಾಂತರ ಜನರ ಕಷ್ಟ ಮನಗಂಡು ಕೂಡಲೇ ಹಕ್ಕುದಾರರಿಗೆ ನ್ಯಾಯ ದೊರಕಿಸಿಕೊಡುವಂತೆ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಶಂಕರ್‌ರಾವ್ ಅವರಿಗೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಹಂದಾಡಿಯ ಸಂತೋಷ್ ಪೂಜಾರಿ, ಬ್ರಹ್ಮಾವರ ದೇವಾನಂದ್, ಹೇರಾಡಿಯ
 ಉದಯಕುಮಾರ್, ಹಂದಾಡಿಯ ಹರೀಶ್ ಪೂಜಾರಿ, ವನಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.