ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದಲ್ಲಿ ಆಕಾಶವಾಣಿ ವೃತ್ತದಿಂದ ಬಸ್ ನಿಲ್ದಾಣವರೆಗೆ ಮೂರು ತಿಂಗಳೊಳಗೆ ಮೇಲ್ಸೆತುವೆ ರಚಿಸುವ ಬಗ್ಗೆ ಸೂಕ್ತ ಮಾಹಿತಿ ನೀಡದಿದ್ದಲ್ಲಿ ಹೋರಾಟ ಮಾಡಲು ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ಸಿದ್ಧವಾಗಿದೆ.
ಬ್ರಹ್ಮಾವರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳ ಲಾಯಿತು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಂದಿನ ಹೋರಾಟದ ರೂಪುರೇಷೆ ಗಳನ್ನು ರೂಪಿಸುವ ಸಲುವಾಗಿ ಶನಿವಾರ ಕರೆದ ಸಭೆಯಲ್ಲಿ ಟ್ಯಾಕ್ಸಿ, ಬಸ್ಸು, ಟೆಂಪೋ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಗೂಡಂಗಡಿ ಮಾಲಿಕರು, ಅಲೆವೂರು ಯೋಗೀಶ್ ಆಚಾರ್ಯ, ಡಾ.ಕೆ.ಪಿ ಶೆಟ್ಟಿ, ಬ್ರಹ್ಮಾವರ ಪರಿಸರದ ಹಲವಾರು ಹಿರಿಯ ಮುಖಂಡರು, ವಿವಿಧ ಪಕ್ಷ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಮೇಲ್ಸೇತುವೆ ರಚನೆಯ ಬಗ್ಗೆ ಚರ್ಚಿಸಿದರು.
ಸಮಿತಿ ಒಂಬತ್ತು ಅಂಶದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನವಿ ಮತ್ತು ಜನಾಭಿಪ್ರಾಯಗಳನ್ನು ಸಂಗ್ರಹಿಸುವ ಮತ್ತು ಉಗ್ರಹೋರಾಟ ನಡೆಸಲು ನಿರ್ಧರಿಸಿತು.
ಹೋರಾಟದ ರೂಪುರೇಷೆೆ: ಮೇಲ್ಸೇತುವೆ ರಚಿಸುವಂತೆ ಪುನಃ ಜನಪ್ರತಿನಿಧಿಗಳಿಗೆ ಮನವಿ ನೀಡುವುದು, ಬ್ರಹ್ಮಾವರ ಮತ್ತು ಸುತ್ತಮುತ್ತಲಿನ ಪ್ರದೇಶದ ಹಿರಿಯರ, ಗಣ್ಯರ, ವಿವಿಧ ಸಂಘಟನೆಗಳ ಪ್ರಮುಖರನ್ನು ಸೇರಿಸಿ ಸಮಿತಿ ರಚಿಸಿ ಜನಪ್ರತಿನಿಧಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವುದು. ಮಾಹಿತಿ ಹಕ್ಕಿನ ಪ್ರಕಾರ ಸಮಿತಿಯಿಂದ ಹಿಂದೆ ನೀಡಿದ ಮನವಿ ಬಗ್ಗೆ ಕೈಗೊಂಡ ಕ್ರಮದ ಕುರಿತು ಮಾಹಿತಿ ಸಂಗ್ರಹ, ಮಾಧ್ಯಮಗಳ ಮೂಲಕ ಜನಾಭಿಪ್ರಾಯ ಸಂಗ್ರಹದ ಮೂಲಕ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.
ಸಾರ್ವಜನಿಕ ಮಾಹಿತಿ ಬಿಡುಗಡೆ ಮತ್ತು ಸಮಿತಿಯಿಂದ ಮೇಲ್ಸೇತುವೆ ರಚನೆಯ ಬೇಡಿಕೆಯ ಬಗ್ಗೆ ನೀಲಿ ನಕಾಶೆ ತಯಾರಿಸಿ ಪ್ರದರ್ಶಿಸುವುದು, ಬೃಹತ್ ಸಾರ್ವಜನಿಕ ಸಭೆ, ಬ್ರಹ್ಮಾವರ ಸಾಂಕೇತಿಕ ಬಂದ್, ಹೆದ್ದಾರಿ ಬಂದ್, ಬ್ರಹ್ಮಾವರ ಸಂಪೂರ್ಣ ಬಂದ್, ಅನಿರ್ಧಿಷ್ಟಾವಧಿ ಮುಷ್ಕರ.... ಹೀಗೆ ಅನೇಕ ಹೋರಾಟವನ್ನು ಮೂರು ತಿಂಗಳ ಅವಧಿಯಲ್ಲಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೆಗ್ಡೆ ತಿಳಿಸಿದರು.
ಬ್ರಹ್ಮಾವರದಲ್ಲಿ 7 ಸ್ಪೆನ್ನ ಮೇಲ್ಸೆತುವೆ ಅಥವಾ ನೆಲ ಮಟ್ಟದಲ್ಲಿನ ರಸ್ತೆ ಮಾಡಲೇಬೇಕು ಎನ್ನುವುದು ನಮ್ಮ ಮುಖ್ಯ ಗುರಿ. ಈಗಿರುವ ರೀತಿಯ ರಸ್ತೆ ಮಾತ್ರ ಬೇಡ ಎನ್ನುವುದು ಇಲ್ಲಿನ ಸಾರ್ವಜನಿಕ ಒತ್ತಾಯ ಎಂದರು.
ಗ್ರಾಮೀಣ ಭಾಗವಾದ ಸಾಲೀಕೇರಿ, ಹೊನ್ನಾಳ, ಬಾರ್ಕೂರು, ಮಂದಾರ್ತಿ, ನೀಲಾವರ, ಪೇತ್ರಿ, ಕುಂಜಾಲುಗಳಿಂದ ಪ್ರತೀ ದಿನ ನೂರಾರು ಬಸ್ಗಳು ನಿಲ್ದಾಣಕ್ಕೆ ಹೇಗೆ ಬರಬೇಕು ಎನ್ನುವ ಬಗ್ಗೆಯೂ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಬೇಕು.
ಮಳೆಗಾಲ ಮುಗಿಯುವ ಒಳಗೆ ಯೋಜನೆಯ ಮಾಹಿತಿ ಸಾರ್ವಜ ನಿಕರಿಗೆ ಬಹಿರಂಗ ಪಡಿಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ಪಿ.ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿಠಲ ಪೂಜಾರಿ, ಸ್ಯಾಮಸನ್ ಸೀಕ್ವೆರಾ, ಮೋಹನ್ ಶೆಟ್ಟಿ, ಸದಾಶಿವ ಪೂಜಾರಿ, ರಾಜು ಪೂಜಾರಿ, ಆನಂದ್ ಟೈಲರ್, ರತ್ನಾಕರ ಶೆಟ್ಟಿ, ಅಶೋಕ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.