ADVERTISEMENT

ಭಾರತೀಯ ಸಂಗೀತ ವಿಶ್ವದಲ್ಲೇ ಶ್ರೇಷ್ಠ- ಈಶ್ವರಯ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:55 IST
Last Updated 19 ಅಕ್ಟೋಬರ್ 2012, 7:55 IST

ಕಾರ್ಕಳ: `ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂಗೀತವಿದ್ದರೆ ಅದು ಭಾರತೀಯ ಶಾಸ್ತ್ರೀಯ ಸಂಗೀತ ಮಾತ್ರ~ ಎಂದು ಸಂಗೀತ ವಿಮರ್ಶಕ ಎ. ಈಶ್ವರಯ್ಯ ಹೇಳಿದರು.

  ಇಲ್ಲಿನ ಅನಂತಶಯನದ ಹೊಟೇಲ್ ಪ್ರಕಾಶದ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಕಾರ್ಕಳದ ಸುರಮಣಿ ಮಹಾಲಕ್ಷ್ಮೀ ಶೆಣೈ ಅವರಿಗೆ ಅಭಿನಂದನಾ ಸಮಾರಂಭದಲ್ಲಿ  `ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಮೃದ್ಧ ಸೌಂದ ರ್ಯ~ ವಿಚಾರ ಕುರಿತು ಮಾತನಾಡಿದರು.

ಶಾಸ್ತ್ರೀಯ ಸಂಗೀತದಲ್ಲಿ ಸ್ವಾತಂತ್ರ್ಯವಿದೆ ಆದರೆ ಸ್ವಚ್ಛಂದತೆಯಿಲ್ಲ. ಮೊದಲು ಶಾಸ್ತ್ರೀಯ ಸಂಗೀತಕ್ಕೆ ದೇಶಭಕ್ತಿಯನ್ನು ವಿವರಿಸುವ ಆಧ್ಯಾತ್ಮಿಕತೆಯನ್ನು ಹೊಂದಿಸಿಕೊಳ್ಳುವ ಮೂಲಕ ರಸಸೃಷ್ಟಿಯ ಉದ್ದೇಶವಿತ್ತು.

ಕಾಲಕ್ರಮೇಣ ಭಾರತಕ್ಕೆ ಬಂದ ಮೊಗಲ ಚಕ್ರ ವರ್ತಿಗಳ ಆಶ್ರಯದಲ್ಲಿ ಸಂಗೀತ ಹಾಡುವ ಸಂದರ್ಭ ಒದಗಿದಾಗ ಅದು ಹಿಂದೂಸ್ಥಾನಿ ಸಂಗೀತವೆಂಬ ಪ್ರಕಾರವನ್ನು ಹುಟ್ಟುಹಾಕಿತು. ಆ ಸಂದರ್ಭದಲ್ಲಿ ಆಧ್ಯಾತ್ಮಿಕತೆಯಿಂದ ದೂರವಾಗುವುದು ಸಹಜವಾಯಿತು. ಮನುಷ್ಯಭಾವನೆಯ ಗುಣಹೊಮ್ಮಿಸುವ ಖ್ಯಾಲ್‌ಗಳು ಬಳಕೆಗೆ ಬಂದವು ಎಂದರು.

`ಹಿಂದೂಸ್ಥಾನಿ ಸಂಗೀತದಲ್ಲಿ ಮಿಶ್ರರಾಗಗಳು ಪ್ರಚಲಿತವಾದವು. ಪ್ರತೀ ಘರಾಣೆಗಳು ತಮ್ಮದೇ ಆದ ಶೈಲಿಯನ್ನು ರೂಢಿಗೆ ತಂದರು. ಶಾಸ್ತ್ರೀಯ ಸಂಗೀತದಲ್ಲಿ ಮೂಲಭೂತ ಬದಲಾವಣೆಯಾಯಿತು. ಅಲ್ಲಿ ಸಾಹಿತ್ಯವಿರುವುದು ಸಂಗೀತ ಬೆಳವಣಿಗೆಗೆ ಮಾತ್ರ. ದಾಸರು ಆಗ ಕರ್ನಾಟಕ ಸಂಗೀತವನ್ನು ಬೆಳೆಸಿದರು. ಅದು ಆಧ್ಯಾತ್ಮಿಕವಾಗಿ ಉಳಿಯಿತು. ಅಲ್ಲಿ ಕೃತಿಗಳಿಗೆ ಆದ್ಯತೆಯಿಲ್ಲ. ಮನೋಧರ್ಮಕ್ಕೆ ನಿಷ್ಠೆಯಿದೆ. ನಮ್ಮ ರಾಜ್ಯ ಎರಡೂ ಪ್ರಕಾರದ ಶಾಸ್ತ್ರೀಯ ಸಂಗೀತವನ್ನು ಬೆಳೆಸಿದೆ.  ಕಾರ್ಕಳದ ಮಹಾಲಕ್ಷ್ಮಿ ಶೆಣೈ ಛಲದಿಂದ ಕಲೆಯ ಮೇಲೆ ಸಿದ್ಧಿ ಪಡೆಯಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿದ್ದಾಳೆ~ ಎಂದರು.

ಮೂಡುಬಿದಿರೆಯ ಡಾ.ಮೋಹನ್ ಆಳ್ವ ಮಹಾಲಕ್ಷ್ಮಿ ಶೆಣೈ ಅವರನ್ನು ಅಭಿನಂದಿಸಿ ಮಾತನಾಡಿ ಶುಭಕೋರಿದರು.

ಸಾಹಿತ್ಯ ಸಂಘದ ಸಂಚಾಲಕ ಪ್ರೊ.ಎಂ.ರಾಮಚಂದ್ರ ಸ್ವಾಗತಿಸಿದರು. ಆತ್ಮೀಯ ಕಡಂಬ ಕಾರ್ಯಕ್ರಮ ನಿರೂಪಿಸಿದರು. ಸಹಕಾರ್ಯದರ್ಶಿ ದೇವಿದಾಸ ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.