ಕಟಪಾಡಿ: `ಸಮಾಜದಲ್ಲಿ ತಮ್ಮ ಮಕ್ಕಳನ್ನು ಬರೇ ಆಸ್ತಿಗೆ ವಾರೀಸುದಾರರನ್ನಾಗಿ ಮಾಡದೇ, ನಮ್ಮ ಸನಾತನ ಸಂಸ್ಕೃತಿಯ ಜವಾಬ್ದಾರರನ್ನಾಗಿ ಬೆಳೆಸಬೇಕು~ ಎಂದು ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸ್ವಾಮೀಜಿ ಕರೆ ನೀಡಿದರು.
ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠದ ವತಿಯಿಂದ ಕಟಪಾಡಿ ವೇಣುಗಿರಿ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆದ ಏಳನೇ ಚಾತುರ್ಮಾಸ ವ್ರತಾಚರಣೆಯನ್ನು ಸೋಮವಾರ ಪೂರ್ಣಗೊಳಿಸಿ ಅವರು ಮಾತನಾಡಿದರು.
`ಸಂಸ್ಕಾರಯುತ ಮಕ್ಕಳು ಸಮಾಜದ ಆಸ್ತಿ. ಯುವಜನಾಂಗಕ್ಕೆ ವೇದಾಧ್ಯಯನ ನೀಡಲು ಧಾರ್ಮಿಕ ಸಂಘಟನೆಗಳು ಮುಂದಾಗಬೇಕು. ಈ ಮೂಲಕ ವಿಶ್ವಕರ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಾವೆಲ್ಲಾ ಶ್ರಮಿಸಬೇಕಾಗಿದೆ~ ಎಂದರು.
ಕರ್ನಾಟಕ ರಾಜ್ಯ ಮುಜರಾಯಿ ಪರಿಷತ್ ಸದಸ್ಯ ಭಾಸ್ಕರ್ ಭಟ್ ಪಂಜ ಹಾಗೂ ಬಾಲಚಂದ್ರ ಭಟ್ ಚಂದುಕೂಡ್ಲು ಅವರನ್ನು ಅಭಿನಂದಿಸಲಾಯಿತು.
ವಿಶೇಷ ವಿಶ್ವಕರ್ಮ ಯಜ್ಞ ಸಂಪನ್ನಗೊಂಡಿತು. ಕಟಪಾಡಿ ವೇಣುಗಿರಿಯ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕರಂಬಳ್ಳಿ ವಿಶ್ವನಾಥ ಆಚಾರ್ಯ, ಪ್ರತಿಷ್ಠಾನದ ಅಧ್ಯಕ್ಷ ಕೇಶವ ಆಚಾರ್ಯ ಮಂಗಳೂರು, ಉದ್ಯಮಿ ಗಂಗಾಧರ್ ಆಚಾರ್ಯ, ಜೆ.ಟಿ.ಆಚಾರ್ಯ, ಸುಂದರ ಆಚಾರ್ಯ ಕಟಪಾಡಿ, ಧಮೇಂದ್ರ ಆಚಾರ್ಯ, ಅಕ್ಷಯ ಶರ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.